Thursday, February 12, 2009

‘ಸ್ವದೇಶ್’ದಲ್ಲಿ ಶಾರುಖ್ ಖಾನ್.. ‘ಹಿಬ್ಬನಕೇರಿ’ಯಲ್ಲಿ ರಾಮಚಂದ್ರ ನಾಯ್ಕ್!





"ನಮ್ಮ ರಾಮಚಂದ್ರಣ್ಣ ಮೂಲತ: ಒಬ್ಬ ಕೂಲಿ. ಅವರ ತಂದೆ ಕನ್ನಾ ನಾಯ್ಕ್ ಅವರ ಕಾಲದಿಂದಲೂ ಆತನಿಗೆ ಬಡತನದ ಬವಣೆ ತಪ್ಪಿದ್ದಿಲ್ಲ. ಶಾಲೆಮುಖ ಅವ ನೋಡಿದವನಲ್ಲ. ಶ್ರಮ ನಂಬಿ ಬದುಕಿದವ. ಕಾಡು ಕಡಿದು ಆತ ಈ ಹಳ್ಳಿ ಕಟ್ಟಿದ. ಹಾಗೆಯೇ ಸ್ವಂತಕ್ಕೆ ಕಟ್ಟಿಕೊಂಡ ಬದುಕು ಇದೆಯಲ್ಲ ಅದು ಪ್ರೇರಣಾದಾಯಿ" ಮಹಾದೇವ ನಾಯ್ಕ್ ಅಭಿಮಾನದಿಂದ ಹೇಳುತ್ತಿದ್ದರೆ.. ರಾಮಚಂದ್ರಣ್ಣ ಅವರ ಕಣ್ಣುಗಳಲ್ಲಿ ಮಿಂಚು ಹೊಳೆದಿತ್ತು. ಶಾರುಖ್ ಖಾನ್ ಅಭಿನಯದ ಚಲನಚಿತ್ರ ‘ಸ್ವದೇಶ’ ನೀವೆಲ್ಲ ನೋಡಿದ್ದೀರಿ. ಅದೇ ಮಾದರಿಯಲ್ಲಿ ರಾಮಚಂದ್ರ ಕನ್ನಾ ನಾಯ್ಕ್ ‘ಹಿಬ್ಬನಕೇರಿ’ಗೆ ಶಾರುಖ್ ಖಾನ್ ಎಂದರೆ ಅತಿಶಯೋಕ್ತಿ ಅಲ್ಲ. ಅಕ್ಷರಶ: ಈ ಜನರದ್ದು ಹೋರಾಟದ ಬದುಕು.

ಬೆಟ್ಟದ ತುದಿಯಿಂದ ಧುಮುಕಿ, ಕಾಡಿನ ಹಾದಿ ಸೀಳಿಕೊಂಡು ಕಣಿವೆಗೆ ಹರಿಯುವ ಜಲಧಾರೆ. ನೀರಿನ ಸೆಳೆವಿನಿಂದ ನುಣುಪಾದ ಮೇಲ್ಮೈ ಹೊಂದಿ ಮಿರಿ ಮಿರಿ ಮಿಂಚುವ ಕಪ್ಪು ಬಣ್ಣದ ಬಂಡೆಗಳು. ಇವುಗಳ ಮಧ್ಯೆ ತಂಪಾಗಿ, ಸೊಕ್ಕಿನಿಂದ ರಭಸದಲ್ಲಿ ಹರಿಯುವ ನೀರು. ಈ ನೀರಿನ ಹರಿವಿನಲ್ಲಿ ೨ ಪೈಪ್ ಫಿಲ್ಟರ್ ಅಳವಡಿಸಿಕೊಂಡು ಕುಳಿತಿವೆ. ಅಲ್ಲಿಂದ ೧.೫ ಕಿ.ಮೀ. ದೂರ ಇಳಿಜಾರಿನಲ್ಲಿ ೨೦ ಅಡಿ ಉದ್ದದ ೨೦೦ ವಿವಿಧ ಗಾತ್ರದ ಪೈಪ್ ಗಳನ್ನು ಗುಂಡಿ ತೋಡಿ ಅಳವಡಿಸಲಾಗಿದೆ. ಆ ನೀರು ಹಿಬ್ಬನಕೇರಿಯ ರಾಮಚಂದ್ರ ಕನ್ನಾ ನಾಯ್ಕ್ ಅವರ ಮನೆಗೆ ಹರಿದು ಬರುತ್ತದೆ. ಹಿತ್ತಿಲಿನಲ್ಲಿ ಅಳವಡಿಸಲಾದ ‘ಟರ್ಬೈನ್’ ಗೆ ಒಂದು ಪೈಪ್ ಜೋಡಿಸಲ್ಪಟ್ಟಿದೆ. ‘ಔಟ್ ಪುಟ್’ ವಾಲ್ವ್ ಬಂದು ಮಾಡಿ ‘ಇನ್ ಪುಟ್’ ವಾಲ್ವ್ ನಾಯ್ಕ್ ತಿರುಗಿಸುತ್ತಾರೆ. ಬೆಟ್ಟದ ಝರಿಯ ನೀರು ನೈಸರ್ಗಿಕ ಒತ್ತಡದಿಂದಾಗಿ ರಭಸದಲ್ಲಿ ಪೈಪ್ ಮೂಲಕ ಹರಿದು ಬಂದು ಟರ್ಬೈನ್ ಚಕ್ರ ತಿರುಗುವಂತೆ ಮಾಡುತ್ತದೆ. ಕ್ಷಣಾರ್ಧದಲ್ಲಿ ೮ ವೋಲ್ಟ್ ವಿದ್ಯುತ್ ಉತ್ಪತ್ತಿಯಾಗಿ ಇಡೀ ಮನೆ ೬ ಫ್ಲೋರೋಸೆಂಟ್ ಬಲ್ಬ್ ಗಳಿಂದ ಪಕ್ಕಾ ಬೆಳಗುತ್ತದೆ! ಇನ್ನೊಂದು ಪೈಪ್ ನೀರಾವರಿ ಸ್ಪ್ರಿಂಕ್ಲರ್ ಗೆ ಅಳವಡಿಸಲಾಗಿದ್ದು, ಯಾವುದೇ ಬಾಹ್ಯ ಒಟ್ಟಡವಿಲ್ಲದೇ ನೈಸರ್ಗಿಕವಾಗಿ ಅದು ಇಡೀ ತೋಟಕ್ಕೆ ೩೬೦ ಡಿಗ್ರಿ ಚಿಮ್ಮಿ ನೀರುಣಿಸುತ್ತದೆ!

ಜೋಗದಿಂದ ಕಾರ್ಗಲ್ ೭ ಕಿ.ಮೀ. ಕಾರ್ಗಲ್ ದಿಂದ ಕಾನೂರುಕೋಟೆ ೩೭ ಕಿ.ಮೀ.ಗಳು. ಅಲ್ಲಿಂದ ೭ ಕಿ.ಮೀ. ಕಾಲು ದಾರಿ ಹಿಬ್ಬನಕೇರಿ. ಜನರೇ ಸತತ ೨ ವರ್ಷಗಳು ಶ್ರಮದಾನ ಮಾಡಿ ನಿರ್ಮಿಸಿದ ಮಣ್ಣಿನ ರಸ್ತೆ ಅದು. ಶರಾವತಿ ಅಭಯಾರಣ್ಯದ ತಪ್ಪಲಿನಲ್ಲಿದೆ ಈ ಗ್ರಾಮ. ಶಿವಮೊಗ್ಗ ಜಿಲ್ಲೆ, ತಾಳಗುಪ್ಪ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಸಾಗರ ತಾಲೂಕಿನ ಕಡೆಯ ಹಳ್ಳಿ. ೨೦೦ ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ, ೩೪ ಕುಟುಂಬಗಳು ಬಾಳುತ್ತಿರುವ ಕಾಡಿನ ಹಳ್ಳಿ.ಹಿಬ್ಬನಕೇರಿ, ಮುಂಡ್ವಾಳ ಮಜಿರೆಗಳು ಸೇರಿ ಬಾನಕೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತವೆ.ಇಲ್ಲಿಂದ ೧೭ ಕಿ.ಮೀ ದೂರದ ಹಳ್ಳಿ ಬಿಳಿಗಾರಿನ ನಾರಾಯಣ ಸದಸ್ಯರಾಗಿದ್ದಾರೆ. ಸಾಗರ ಪಕ್ಕದ ಕುಗ್ವೆ ಗ್ರಾಮದ ರವಿ ಕುಗ್ವೆ ಜಿಲಾ ಪಂಚಾಯಿತಿ ಸದಸ್ಯರಾಗಿದ್ದಾರೆ. ಸಾಗರದ ಗೋಪಾಲಕೃಷ್ಣ ಬೀಳೂರು ಈ ಭಾಗದ ಶಾಸಕರು.

ಮೂಲಭೂತ ಸೌಕರ್ಯ ಪ್ರಶ್ನೆಯೇ ಇಲ್ಲ. ಸರಕಾರ ಕಲ್ಪಿಸುವ ಮಾತೂ ಇಲ್ಲ. ಕಾರಣ ನೂರೆಂಟು ತಾಂತ್ರಿಕ ಹಾಗು ಆಡಳಿತಾತ್ಮಕ ತೊಂದರೆಗಳು. ಸರಕಾರ ಶರಾವತಿ ಹಿನ್ನೀರಿನ ಫಲವಾಗಿ ಒಕ್ಕಲೆಬ್ಬಿಸಿದ ಜನರಿಗೆ ಪುನರ್ವಸತಿ ಕಲ್ಪಿಸಲು ಈ ಜಾಗೆ ಬಳಸಿಕೊಂಡಿದೆ. ಸರಕಾರ ಸಾಗುವಳಿ ಮಾಡಿಕೊಳ್ಳಲು ಕೊಟ್ಟ ಪಟ್ಟಾ ಭೂಮಿ ೩ ಎಕರೆ ಮಿಕ್ಕುವುದಿಲ್ಲ. ಆದರೆ ಅಕ್ರಮ-ಸಕ್ರಮ ಮಾದರಿಯಲ್ಲಿ ೧೦ ರಿಂದ ೧೨ ಎಕರೆ ಅರಣ್ಯ ಭೂಮಿಯನ್ನು ಜನ ಸಾಗುವಳಿ ಮಾಡಿಕೊಂಡಿದ್ದಾರೆ. ಇದು ಅರಣ್ಯ ಇಲಾಖೆಯ ಕಣ್ಣನ್ನು ಸಹಜವಾಗಿಯೇ ಕೆಂಪಾಗಿಸಿದೆ. ಅಡಿಕೆ, ಬಾಳೆ, ತೆಂಗು, ಗೇರು, ಮಾವು, ಹಲಸು, ಪಪ್ಪಾಯಿ ಸೇರಿದಂತೆ ಭತ್ತ, ವೆನಿಲ್ಲಾ, ಎಲೆ ಹಾಗು ಸಾಂಬಾರ ಪದಾರ್ಥ ಮತ್ತು ತರಕಾರಿ ಇಲ್ಲಿನ ಜನ ಬೆಳೆದುಕೊಳ್ಳುತ್ತಾರೆ. ಸರಕು ಸಾಗಣೆಗೆ ದುಪ್ಪಟ್ಟು ಹಣ ತೆತ್ತು ಸಾಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಒಯ್ದು ಫಸಲು ಮಾರಾಟ ಮಾಡಲಾಗುತ್ತಿದೆ. ೩ ವರ್ಷಗಳ ಕೆಳಗೆ ಕಾಲು ದಾರಿಯಲ್ಲಿ ತಲೆ ಮೇಲೆ ಹೊತ್ತು ಕಾನೂರುಕೋಟೆಯ ವರೆಗೆ ಸಾಗಿಸುತ್ತಿದ್ದರು ಇಲ್ಲಿನ ಮಣ್ಣಿನ ಮಕ್ಕಳು.
ಹೀಗೆ ರೋಚಕ ವಿಷಯಗಳನ್ನು ಕಿಲಾರದ ವಾಸುದೇವ ನಾಯ್ಕ್ (ಸಂಪೂರ್ಣ ಸಾವಯವ ಗ್ರಾಮದ ರುವಾರಿ ಹಾಗು ಅಕ್ಷಯ ಜೀವನ ಕಿಲಾರದ ಕಾರ್ಯದರ್ಶಿ) ನಮಗೆಲ್ಲ ದಾರಿಯುದ್ದಕ್ಕೂ ವಿವರಿಸುತ್ತ ಹೊರಟಿದ್ದರು. ಚಿಕ್ಕ ಮಣ್ಣಿನ ರಸ್ತೆಯನ್ನು ಸೀಳಿಕೊಂಡು ಇಳಿಜಾರಿನಲ್ಲಿ ಜಾರುವಂತೆ ಮಾರುತಿ ಕಾರು ಬೆಟ್ಟ ಇಳಿಯುತ್ತಿತ್ತು. ಹಿಬ್ಬನಕೇರಿ ನಮಗೆಲ್ಲ ಜಗತ್ತಿನ ೮ನೇ ವಿಸ್ಮಯವಾಗಿ ಪರಿಣಮಿಸಿತ್ತು. ಮಧ್ಯಾನ್ಹ ೧೨ ಗಂಟೆಯ ಸಮಯ..ಆದರೂ ರಸ್ತೆಯುದ್ದಕ್ಕೂ ಮಬ್ಬು ಬೆಳಕು. ಕಾರಿನ ಸಾರಥಿ ನನ್ನ ಅಣ್ಣ ಸೋಮಣ್ಣ ಕಾರಿನ ಒಳಗೂ, ಹೊರಗೂ ಧೂಳು ಅಡರುತ್ತಿದ್ದ ರೀತಿ, ಇಕ್ಕಟ್ಟಾದ ರಸ್ತೆಯಲ್ಲಿ ತುಸು ಆಯ ತಪ್ಪಿದರೂ ಪ್ರಪಾತಕ್ಕೆ ಬೀಳಬಹುದಾದ ಸ್ಥಿತಿ, ಎಲ್ಲ ಆಗಾಗ ನೆನೆಯುತ್ತಿದ್ದ. "ಇನ್ನೂ ಇಂಥಾ ಎಷ್ಟ ಹಳ್ಳಿ ತೋರಸಬೇಕು ಅಂತ ಮಾಡಿ?" ಎಂದು ಕಾಲೆಳೆಯುತ್ತಿದ್ದ. ಮಿತ್ರ ಲಿಂಗರಾಜ "ನಿನ್ನ ಜೀವನ ಪೂರ್ತಿ ಇದ ಆತು..ಇದನ್ನ ಬಿಟ್ಟ ಮತ್ತೇನರೆ ಮಾಡಿದ್ರ ಹೇಳಲಾ.." ಎಂದು ಕಿಚಾಯಿಸುತ್ತಿದ್ದ. ನನ್ನ ವಿದ್ಯಾರ್ಥಿ ಮಿತ್ರರುಗಳಾದ ಗಣಪತಿ ಹೆಗಡೆ ಹಾಗು ಹರೀಶಕುಮಾರ್ ಸಹ ಉತ್ಸುಕರಾಗಿದ್ದರು. ಆದರೂ ಎಲ್ಲರೂ ಪ್ರೀತಿಯಿಂದ ಆ ಹಳ್ಳಿ ಕಾಣಸಿಗುವುದನ್ನೇ ಎದುರು ನೋಡುತ್ತ ಇಕ್ಕೆಲಗಳಲ್ಲಿ ಇಣುಕು ಸೃಷ್ಟಿ ಸೌಂದರ್ಯ ಸವಿಯುತ್ತಿದ್ದೆವು. ನಿಸರ್ಗವೆಂಬ ಕೌತುಕದ ಮುಂದೆ ಮಾನವ ಎಷ್ಟು ಕುಬ್ಜ ಎಂದು ಭಾಸವಾಗುತ್ತಿತ್ತು.

ವಾಸು ಅಣ್ಣ ಪಕ್ಕದಲ್ಲಿ ಕಾರು ನಿಲ್ಲಿಸುವಂತೆ ಸೂಚನೆ ಕೊಟ್ಟರು. "ಇನ್ನು ಇಳಿದು ನಡೆಯುವಾ.. ಕಾರು ಆಚೆ ಬದಿಗೆ ಹೋಗದು" ಎಂದರು. ನೀರವವಾಗಿ ಹರಿಯುತ್ತಿದ್ದ ಹಿಬ್ಬನಕೇರಿಯ ಹಳ್ಳವನ್ನು ದಾಟಿ ಮತ್ತೆ ಗುಡ್ಡ ಹತ್ತಿದೆವು. ಅರ್ಧ ಕಿ.ಮೀ. ಅಂತರದಲ್ಲಿ ರಾಮಚಂದ್ರ ನಾಯ್ಕ್ ಅವರ ಮನೆ ಕಾಣಿಸಿತು. ದೂರದಿಂದಲೇ ಮನೆಗೆ ಸೋಲಾರ್ ಅಳವಡಿಕೆಯಾಗಿರುವುದು, ಡಿ.ಟಿ.ಎಚ್ ಡಿಸ್ಕ್ ಅಣಿಗೊಳಿಸಿರುವುದು ಕಾಣಿಸಿತು. ಖುಷಿಯಿಂದ ಬಂದ ರಾಮಚಂದ್ರ ನಾಯ್ಕ್ ಹತ್ತಾರು ವರ್ಷಗಳ ಪರಿಚಯವಿದ್ದಂತೆ ಕುಶಲ ಕೇಳಿ, ದೊಡ್ಡ ಗುಣ ಮೆರೆದರು. ಕಾಲಿಗೆ ನೀರು ಕೊಟ್ಟು, ವಸ್ತ್ರ ನೀಡಿ ಸ್ವಾಗತಿಸಿದರು. ಕಾಡು ಬಾಳೆ, ಜಂಬು ಹಣ್ಣು ನಮ್ಮ ಆತಿಥ್ಯಕ್ಕೆ ಕಾಯ್ದಿದ್ದವು. ವಾಸು ಅಣ ನಮ್ಮೆಲ್ಲರನ್ನು ಅವರಿಗೆ ಪರಿಚಯಿಸಿದರು.

ರಾಮಚಂದ್ರ ನಾಯ್ಕ್ ನಮ್ಮೊಂದಿಗೆ ಮಾತಿಗಿಳಿದರು. ಅವರ ತಂದೆ ಕನ್ನ ನಾಯ್ಕ್ ಅವರು ಒಡೆಯರ ಕೈ ಕೆಳಗೆ ಜೀವನ ಪೂರ್ತಿ ಜೀತದಾಳಾಗಿ ದುಡಿದವರು. ಆದರೆ ಆ ಚಾಕರಿ ರಾಮಣ್ಣ ಅವರಿಗೆ ಬೇಕಿರಲಿಲ್ಲ. ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ತಾವೇ ಆಯ್ದುಕೊಂಡು ಸರಕಾರದಿಂದ ಪಟ್ಟಾ ಭೂಮಿ ಪಡೆದು ಇಲ್ಲಿಗೆ ಬಂದಿದ್ದಾಗಿ ಹೇಳಿದರು. ಹತ್ತಾರು ವರ್ಷಗಳ ಕಾಲ ಕತ್ತಲೆ ಹಾಗು ಚಿಮಣಿ ದೀಪದಲ್ಲಿ ಕಾಲು ನೂಕಿದ ನಂತರ ಕೊಲ್ಲೂರಿಗೆ ಹೋಗುವ ಅವಕಾಶ ಸಿಕ್ಕಿತು. ಅಲ್ಲಿ ಓರ್ವರು ಬೆಟ್ಟದ ತುದಿಯ ಝರಿ ನೀರಿಗೆ ಪೈಪ್ ಅಳವಡಿಸಿ, ಸಣ್ಣ ಟರ್ಬೈನ್ ಮೂಲಕ ವಿದ್ಯುತ್ ಉತ್ಪಾದಿಸಿಕೊಂಡು ಮನೆಗೆ ಬಳಸುತ್ತಿದ್ದ ರೀತಿ ಇವರಿಗೆ ಮೋಡಿ ಮಾಡಿತು. ತಾವು ಏಕೆ ಈ ಪ್ರಯೋಗ ಕೈಗೊಳ್ಳ ಬಾರದು ಎಂದು ಯೋಚಿಸಿದರು.

ಈ ಸಂದರ್ಭದಲ್ಲಿ ಅವರ ನೆರವಿಗೆ ಬಂದವರು ಸಿಗಂದೂರು ಸಮೀಪದ ಗೊರಗೋಡಿನ ಸತ್ಯ ಅವರು. ೨೦೦೪ರಲ್ಲಿ ಅವರ ತಾಂತ್ರಿಕ ಸಹಾಯದಲ್ಲಿ ೭ ಸಾವಿರ ರುಪಾಯಿ ಖರ್ಚಿಸಿ ಟರ್ಬೈನ್ ಖರೀದಿಸಿದ್ದಾಯಿತು. ನಂತರ ೧೮ ಸಾವಿರ ರುಪಾಯಿ ಖರ್ಚಿಸಿ ಬೆಟ್ಟದ ತುದಿಯಿಂದ ಮನೆಯ ವರೆಗೆ ಪೈಪ್ ಲೈನ್ ಅಳವಡಿಸಿದ್ದಾಯಿತು. ಅಂತೂ ೨೫ ಸಾವಿರ ರುಪಾಯಿಗಳ ಒಟ್ಟು ವೆಚ್ಚದಲ್ಲಿ ಮನೆಗೆ ವಿದ್ಯುತ್ ಹರಿಯಿತು. ಅಂದಹಾಗೆ ವಿಶೇಷವೆಂದರೆ ಅವರ ಸಮುದಾಯ ಕಾಳಜಿ. ಹಿಬ್ಬನಕೇರಿಯಲ್ಲಿ ಈ ಪ್ರಯೋಗ ಮಾಡಲು ಉಳಿದವರಿಗೂ ಪ್ರೇರಣೆ ನೀಡಿದವರು ರಾಮಚಂದ್ರ ನಾಯ್ಕ್. ಹಾಗಾಗಿ ಅವರ ಮನೆ ಮಾತ್ರವಲ್ಲ..ಹತ್ತಾರು ಮನೆಗಳ ದೀಪ ಪ್ರಥಮ ಬಾರಿಗೆ ಬೆಳಗಲು ಆರಂಭಿಸಿದ್ದು ಹೀಗೆ. ಈಗ ಟರ್ಬೈನ್ ದೀಪ ಉರಿಯುತ್ತಿರುವುದು ೫ ಮನೆಗಳಲ್ಲಿ. ನಾಯ್ಕ್ ಹೇಳಿದರು.."ಕಳೆದ ೫ ವರ್ಷಗಳಲ್ಲಿ ಯಾವ ರಿಪೇರಿ, ನಿರ್ವಹಣೆ ಖರ್ಚಿಲ್ಲ. ಒಟ್ಟು ೮ ವೋಲ್ಟ್ ಕರೆಂಟ್ ಸಿಗ್ತದೆ. ೬ ಬಲ್ಬ್ ಉರಿತಾವೆ. ಸಂಜೆ ೬ ರಿಂದ ರಾತ್ರಿ ೧೧.೩೦ರ ವರೆಗೆ ಉರಿಸ್ತೇವೆ. ತಪ್ಪು ತಿಳೀಬೇಡಿ ಟಿ.ವಿ. ಇದರಿಂದ ಉರಿಯೋಲ್ಲ. ಹಾಗಾಗಿ ಮನೆ ಸೂರಿನ ಮೇಲೆ ಸೋಲಾರ್ ಛತ್ರಿ ಅಂಟಿಸಿರೋದು. ನನ್ನ ಮೋಬೈಲ್..ಬೇಕಿದ್ರೆ ನಿಮ್ಮ ಕ್ಯಾಮೆರಾ ಚಾರ್ಜ್ ಮಾಡಿಕೋಬಹುದು" ಎಂದರು ಉತ್ಸಾಹದಿಂದ. ಅಷ್ಟೇ ಅಲ್ಲ. ಕರೆಂಟ್ ಉತ್ಪತ್ತಿಸಲು ಬಳಸಿದ ನೀರು ಪೋಲಾಗದಂತೆ ಮತ್ತೆ ಭತ್ತದ ಗದ್ದೆಗೆ ಹರಿಸಿಕೊಂಡು ಅವರು ಕೃಷಿ ಕೈಗೊಳ್ಳುತ್ತಾರೆ. ಅವಶ್ಯಕತೆಗೆ ತಕ್ಕಷ್ಟು ಮಾತ್ರ ವ್ಯವಸ್ಥಿತವಾಗಿ ನೀರಿನ ಬಳಕೆ, ಅಪವ್ಯವ ಇಲ್ಲ.

ಬ್ಯಾಟರಿ ವ್ಯವಸ್ಥೆ ಮಾಡಿಕೊಂಡಿಲ್ಲವೇ? ಅಣ್ಣ ಸೋಮಣ್ಣ ನಾಯ್ಕ್ ಅವರನ್ನು ಪ್ರಶ್ನಿಸಿದ. "ನೋಡ್ರಿ..೫ ಕಿ.ಮೀ ಆ ಬ್ಯಾಟರಿಗಳನ್ನ ಹೊತ್ತುಕೊಂಡು ಬರೋದು ಹ್ಯಾಗೆ? ಹೋಗಲಿ ರಿಪೇರಿ ಬಂದ್ರೆ ಮತ್ತೆ ಸಾಗರಕ್ಕೆ ಒಯ್ಯೋದು ಹೇಗೆ? ಮೇಲಾಗಿ..ನಮಗೆ ಕರೆಂಟ್ ಕಾದಿಡೋ ಪ್ರಶ್ನೆ ಇಲ್ಲ. ಝರಿಯಲ್ಲಿ ನೀರು ಇರೋ ವರೆಗೂ ನಮಗೆ ಕರೆಂಟ್ ತೊಂದರೆ ಇಲ್ಲ. ಇಲ್ಲಿಯವರೆಗೆ ಝರಿ ನೀರು ಇಂಗಿಯೇ ಇಲ್ಲ. ಹಾಗಾಗಿ ಆ ಸರ್ಕಸ್ ಬೇಕಿಲ್ಲ" ಅಂದ್ರು. "ಚಿರಂಜೀವಿ ಸಿಂಗ್ ನೇತೃತ್ವದ ಆಯೋಗ ನಕ್ಸಲ್ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿದ್ದು ನಿಮಗೆಲ್ಲ ಗೊತ್ತಲ್ಲ?". ರಾಮಚಂದ್ರಣ್ಣ ನಮ್ಮನ್ನೇ ಆ ಕುರಿತು ಪ್ರಶ್ನಿಸಿದರು. "ಹಿಬ್ಬನಕೇರಿಯಿಂದ ೫ ಕಿ.ಮೀ ದೂರದಲ್ಲಿರೋ ಕಾನೂರಿಗೆ ಸರಕಾರ ನಕ್ಸಲ್ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ನಮ್ಮ ಹಿಬ್ಬನಕೇರಿ ಆ ಪಟ್ಟಿಯಲ್ಲಿ ಬರೋಲ್ಲವಂತೆ! ಅದರಂತೆ ಕಾನೂರಿನ ಜನರ ಅಭಿವೃದ್ಧಿ ಸಾಗಿದೆ. ನಾವು ಮನುಷ್ಯರಲ್ಲವಾ?" ಅಂದ್ರು. ಉತ್ತರ ನಮ್ಮಲ್ಲಿರಲಿಲ್ಲ.

ಸಂಬಂಧಪಟ್ಟ ಎಲ್ಲರನ್ನೂ ಭೇಟಿ ಮಾಡಿ ಈ ವಿಷಯ ಮನವರಿಕೆ ಮಾಡಿಸಿದ್ದಾಗಿ ಹೇಳಿದರು. "ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ನೀಡಿ ವೋಟ್ ಹಾಕಿಸಿಕೊಂಡಿದ್ದು ಬಿಟ್ರೆ ಆಮೇಲೆ ನಮ್ಮವರು ಯಾರೂ ಈ ಊರಿಗೆ ಕಾಲಿಡಲಿಲ್ಲ. ಊರ ದೈವ ಸೋಮೇಶ್ವರನ ಮೇಲೆ ಆಣೆ ಮಾಡಿ ರಸ್ತೆ ಮಾಡಿಸಿಕೊಡುವುದಾಗಿ ಹೇಳಿದ್ರು ನೋಡಿ" ಎಂದು ರಾಮಚಂದ್ರಣ್ಣ ಸಿಟ್ಟಿನಿಂದ ಹೇಳಿದರು.









No comments: