Wednesday, June 10, 2009

ಗದುಗಿನ ಅಣ್ಣಿಗೇರಿ ಬಳಿಯ ಹಳ್ಳಿಕೇರಿಯಲ್ಲಿ ಹೀಗೊಂದು ‘ಹಣ ನುಂಗುವ ನೀರಿನ ಯೋಜನೆ’!


ಹಳ್ಳಿಯ ಜನಸಂಖ್ಯೆ ೮ ಸಾವಿರ. ಹಾಗೆಯೇ ಅಲ್ಲಿನ ಸಾಕು ದನಗಳ ಸಂಖ್ಯೆ ಜನ ಸಂಖ್ಯೆಯ ಅರ್ಧದಷ್ಟು. ಆದರೆ ಎಲ್ಲರಿಗೂ ಸದ್ಯ ದೊರಕುವುದು ದಿನವೊಂದಕ್ಕೆ ೧ ಲೋಟ ಮಾತ್ರ ನೀರು!

ದಗ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ಸಮೀಪದ ಹಲ್ಲಿಕೇರಿಯ ಹೃದಯ ಹಿಂಡುವ ಕಥೆ ಇದು. ಒಂದಾಳಿಗೆ ದಿನಕ್ಕೆ ೧೬ ಲೋಟಗಳಷ್ಟು ನೀರು ಕುಡಿಯಲು ಬೇಕು. ಹಾಗೆಯೇ ೧೦ ಲೀಟರ್ ನೀರು ಸ್ನಾನಕ್ಕೆ ಮತ್ತು ೫ ಲೀಟರ್ ನೀರು ಶೌಚ ಮತ್ತು ಮುಖ ಮಾರ್ಜನಕ್ಕೆ. ಆದರೆ ಇಲ್ಲಿನ ಜನ-ಜಾನುವಾರುಗಳ ಸ್ಥಿತಿ ನೀರಿಲ್ಲದೇ ದಯನೀಯ. ಹಿರೀಕರು ಕಟ್ಟಿಸಿದ್ದ ಬಾವಿಯ ನೀರು ಸಾಲದೇ ನಿತ್ಯ ಕಚ್ಚಾಡಿ ಶೋಚನೀಯ ಪರಿಸ್ಥಿತಿಗೆ ಹಳ್ಳಿಕೇರಿ ತಲುಪಿದೆ.

ನೀರಿಗಾಗಿ ಇಲ್ಲಿನ ಜನ ಪಡುತ್ತ ಬಂದ ಬವಣೆಗೆ ನಾಲ್ಕಾರು ದಶಕಗಳಷ್ಟು ಹಳೆಯದಾದ ಇತಿಹಾಸವಿದೆ. ನೀರು ಪಡೆಯಲು ನಡೆಸುತ್ತ ಬಂದ ಹೋರಾಟಗಳಿಗೂ ದಶಕಗಳಷ್ಟು ಐತಿಹ್ಯಗಳಿವೆ. ಆದರೆ ನಿಮಗೆ ಗೊತ್ತಲ್ಲ. ನಮ್ಮ ಆಡಳಿತಶಾಹಿಗೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಮನಸ್ಸಿಲ್ಲ. ಏನಿದ್ದರೂ ‘ಕಡಿದಷ್ಟೇ ತುರುಸಿಕೊಳ್ಳುವ ಜಾಯಮಾನ’. ಹಾಗಾಗಿ ಉಗುರಿನ ಸಮಸ್ಯೆಗೆ ಕೊಡಲಿ ಬಳಸುವ ಅನಿವಾರ್ಯತೆ. ಈ ಹಳ್ಳಿಕೇರಿಯಲ್ಲಿ ಜಿಲ್ಲಾಡಳಿತ ಅನುಷ್ಠಾನಗೊಳಿಸಿದ ಲಕ್ಷಾಂತರ ರುಪಾಯಿ ಮೌಲ್ಯದ ಯೋಜನೆಗಳ ಕಡತ ದಾಖಲೆ ಗಮನಿಸಿದರೆ ನಮ್ಮ ತಲೆ ಸುತ್ತಬೇಕು. ‘ಅಷ್ಟ ಖರ್ಚಾಗಿದ್ರ ನಮ್ಮೂರಿಗೆ ಮುಂದಿನ ಹತ್ತು ತಲೆಮಾರಿಗೆ ನೀರಿನ ಸಮಸ್ಯೆ ಬರಬಾರ್ದು’ ಗ್ರಾಮದ ಯಲ್ಲಪ್ಪ ಚಂದ್ರಣ್ಣವರ ಹೇಳುತ್ತಿದ್ದರೆ ಜನರ ಆಕ್ರೋಷ ರಟ್ಟೆಗೆ ಸದ್ಯದಲ್ಲಿ ಇಳಿಯುವುದೇನೂ ತಡವಿಲ್ಲ.

ಆಡಳಿತಶಾಹಿಯ ಕಾರ್ಯವೈಖರಿಯ ಸ್ಯಾಂಪಲ್ ಹೀಗಿದೆ: ಜಿಲ್ಲಾಡಳಿತ ವಿಶ್ವ ಬ್ಯಾಂಕಿನ ನೆರವಿನಲ್ಲಿ ಹಳ್ಳಿಕೇರಿ ಗ್ರಾಮಕ್ಕೆ ಜಲ ನಿರ್ಮಲ ಯೋಜನೆ ಅನುಷ್ಠಾನಗೊಳಿಸಿ, ಬಿಡುಗಡೆ ಮಾಡಿದ ಹಣ ಕೇವಲ ೩೪ ಲಕ್ಷ ರುಪಾಯಿ. ಶಾಶ್ವತ ಕುಡಿಯುವ ನೀರಿನ ಮೂಲವಿರಬೇಕು ಅಥವಾ ಗುರುತಿಸಿ ಯೋಜನೆ ಅನುಷ್ಠಾನ ಗೊಳಿಸಬೇಕು ಎಂಬ ಶರತ್ತನ್ನು ಅಧಿಕಾರಿಗಳು ಗಣನೆಗೆ ತೆಗೆದುಕೊಂಡಂತೆ ಕಾಣುವುದಿಲ್ಲ. ಕಾರಣ ಹಳ್ಳಿಕೇರಿ ಗ್ರಾಮದಿಂದ ೪ ಕಿ.ಮೀ. ದೂರದಲ್ಲಿರುವ ಮಲಪ್ರಭಾ ಬಲದಂಡೆ ಕಾಲುವೆ ಬಿಟ್ಟು, ೩ ಕಿ.ಮೀ ಅಂತರದಲ್ಲಿರುವ ಹಿರೇಹಳ್ಳದಲ್ಲಿ ಕೊಳವೆ ಬಾವಿ ಕೊರೆದು ‘ಹಣ ನುಂಗುವ ಕೆರೆ’ ಕಟ್ಟಿದರು. ಜನರ ತಾಪತ್ರಯ ಮಾತ್ರ ಪರಿಹಾರ ಕಾಣಲಿಲ್ಲ. ಕಾರಣ ೨ ವರ್ಷದ ಅವಧಿಯಲ್ಲಿ ಆ ಬೋರ್ ವೆಲ್ ಬತ್ತಿ ಬೋರಲು ಬಿತ್ತು!

ಹಳ್ಳಿಕೇರಿಯ ಜನ ಮತ್ತೆ ಜಿಲ್ಲಾ ಪಂಚಾಯ್ತಿಗೆ ನೀರು ಒದಗಿಸಿಕೊಡಲು ಮೊರೆ ಹೋದರು. ಆದರೆ ಜಿಲ್ಲಾಡಳಿತ ಹೊಸ ಲೆಕ್ಕಕ್ಕೆ ಮುನ್ನುಡಿ ಬರೆಯಲು ಸಿದ್ಧವಾಗಲಿಲ್ಲ. ಆದರೆ ಆ ಗ್ರಾಮದ ಸಕ್ರಿಯ ರಾಜಕಾರಿಣಿ ಎಚ್.ಎ.ಮಾಡೊಳ್ಳಿ ಮುಂಗೈ ಜೋರಿನಿಂದ ಮತ್ತೆ ೧೨ ಲಕ್ಷ ರುಪಾಯಿ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾದರು. ಅವರೇ ಹೇಳುವಂತೆ "ಮಲಪ್ರಭಾ ಬಲದಂಡೆ ಕಾಲುವೆಯಿಂದ ನೀರು ಹಳ್ಳಿಕೇರಿಗೆ ಪುರೋಟಸಬೇಕು ಅಂತ ಜಿಲ್ಲಾಡಳಿತ ನಿರ್ಧಾರ ಮಾಡ್ತು. ಆದ್ರೆ ಕಾಮ್ಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರ ಭಾಳ ಕಳಪೆ ಕಾಮ್ಗಾರಿ ಮಾಡಿಸಿದ. ಆತ ಹಾಕಿದ ಮೂರಿಂಚಿನ ಪೈಪ್ ದೊಳಗ ಮಲಪ್ರಭಾ ನೀರು ಹಳ್ಳಿಕೇರಿಗೆ ಹರದು ಬರಲಿಲ್ಲ!"
ಈ ಮಧ್ಯೆ, ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಹಿರೇಹಳ್ಳದಲ್ಲಿ ಮತ್ತೊಂದು ಬೋರ್ ವೆಲ್ ಕೊರೆದರೂ ಉಪಯೋಗವಾಗಿಲ್ಲ.



ಅಲ್ಲಿಯ ನೀರು ಸಹ ದಾಹ ತೀರಿಸಲು ಉಪಯುಕ್ತವಾಗಿಲ್ಲ ಎಂಬ ದೂರು ದಸ್ತಗೀರ್ ಸಾಬ್, ಶಿವಪ್ಪ ಕುರಹಟ್ಟಿ, ಎಸ್.ಟಿ.ಗಿರೆಡ್ಡಿ ಅವರದ್ದು. ಕೆರೆಯ ನೀರು ಮಳೆ ಬಿದ್ದಾಗ ಪೋಲಾಗದಂತೆ ಒಡ್ಡ್ಡು ನಿರ್ಮಿಸಬೇಕು, ಹೂಳೆತ್ತಿಸಿ ದುರಸ್ಥಿ ಮಾಡಬೇಕು, ಗ್ರಾಮಸ್ತಹ್ರ ಕುಡಿಯುವ ನೀರಿನ ಪೂರೈಕೆಗಾಗಿ ನೀರಾವರಿ ಇಲಾಖೆ ನಿಗದಿ ಪಡಿಸಿದ ಗರಿಷ್ಟ ಇಂಚಿನ ಪೈಪ್ ಅಳವಡಿಸಿ, ಮಲಪ್ರಭಾ ಬಲದಂಡೆ ಕಾಲುವೆಯಿಂದ ನೀರು ಪೂರೈಸಬೇಕು ಎಂಬುದು ಅವರ ಆಗ್ರಹ ಪೂರ್ವಕ ವಿನಂತಿ.



ಹೀಗೆ ಒಟ್ಟು ೪೬ ಲಕ್ಷ ರುಪಾಯಿ ಹಳ್ಳಿಕೇರಿ ಜನ-ಜಾನುವಾರುಗಳಿಗೆ ನೀರು ಕುಡಿಸಲು ಬಿಡುಗಡೆಯಾಗಿದ್ದು, ಕಡತಗಳಲ್ಲಿ ಅಂಕಿಅಂಶ ಲಭ್ಯ. ಆದರೆ ಸಮಸ್ಯೆ ಮಾತ್ರ ಮತ್ತಷ್ಟು ಉಲ್ಬಣಿಸಿದೆ. ಹಳ್ಳಿಕೇರಿಯ ಕೆರೆ ‘ರೊಕ್ಕ ನುಂಗುವ ಕೆರೆಯಾಗಿ’, ಇದ್ದ ಹಿರೀಕರ ಬಾವಿ ‘ಜೀವ ಹಿಂಗುವ ಗುಂಡಿಯಾಗಿ’ ಪರಿವರ್ತನೆಗೊಂಡಿವೆ. ಗ್ರಾಮದಲ್ಲಿ ವಾಹನಗಳಿದ್ದವರು, ರಟ್ಟೆ ಹಾಗು ತೋಳ್ಬಲ ಇರುವ ಯುವಕರು ಸಮೀಪದ ಇಬ್ರಾಹಿಂಪೂರ್ ಹಾಗು ಅಡ್ನೂರ್ ಗ್ರಾಮಗಳಿಂದ ನೀರನ್ನು ಹೊತ್ತು, ಹೇರಿಕೊಂಡು ತರುತ್ತಿದ್ದಾರೆ.



ವಾಹನಗಳ ವ್ಯವಸ್ಥೆ ಹೊಂದಿಲ್ಲದವರು ತೊಟ್ಟು ನೀರಿಗಾಗಿ ಅದೇ ಹಿರೀಕರ ಬಾವಿಯಲ್ಲಿ ಜೀವದ ಹಂಗು ತೊರೆದು, ತರಹೇವಾರಿ ಸರ್ಕಸ್ ಮಾಡುತ್ತ ಪರಸ್ಪರ ಕೈ,ಕೈ ಮೀಲಾಯಿಸುವ ಹಂತಕ್ಕೂ ಹೋಗುತ್ತಿದ್ದಾರೆ. ಹಿರಿಯರಿಗೆ ನಿತ್ಯ ಇವರೆಲ್ಲರ ಜಗಳ



ಬಿಡಿಸುವುದೇ ಒಂದು ಉದ್ಯೋಗವಾಗಿದೆ. ಯುಅವಕರೆಲ್ಲ ನೀರು ತುಂಬುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.
ನೀರಿನ ಬವಣೆಯಿಂದಾಗಿ ಹಳ್ಳಿಕೇರಿಯಲ್ಲಿ ಜನರ ನಿದ್ದೆ ಹಾರಿದೆ. ನೆಮ್ಮದಿ ಮಣ್ಣುಗೂಡಿದೆ. ಅಣ್ಣಿಗೇರಿ ಪಟ್ಟಣ ಪುರಸಭೆ ಕಳೆದ ೨ ದಶಕಗಳ ಹಿಂದೆ ಮೊಣಕಾಲುಗಳ ವರೆಗೆ ಎಣ್ಣೆ ಹರಿಸುವಷ್ಟು ಸುಭೀಕ್ಷೆಯಿಂದ ಕೂಡಿತ್ತು!

Thursday, February 12, 2009

‘ಸ್ವದೇಶ್’ದಲ್ಲಿ ಶಾರುಖ್ ಖಾನ್.. ‘ಹಿಬ್ಬನಕೇರಿ’ಯಲ್ಲಿ ರಾಮಚಂದ್ರ ನಾಯ್ಕ್!





"ನಮ್ಮ ರಾಮಚಂದ್ರಣ್ಣ ಮೂಲತ: ಒಬ್ಬ ಕೂಲಿ. ಅವರ ತಂದೆ ಕನ್ನಾ ನಾಯ್ಕ್ ಅವರ ಕಾಲದಿಂದಲೂ ಆತನಿಗೆ ಬಡತನದ ಬವಣೆ ತಪ್ಪಿದ್ದಿಲ್ಲ. ಶಾಲೆಮುಖ ಅವ ನೋಡಿದವನಲ್ಲ. ಶ್ರಮ ನಂಬಿ ಬದುಕಿದವ. ಕಾಡು ಕಡಿದು ಆತ ಈ ಹಳ್ಳಿ ಕಟ್ಟಿದ. ಹಾಗೆಯೇ ಸ್ವಂತಕ್ಕೆ ಕಟ್ಟಿಕೊಂಡ ಬದುಕು ಇದೆಯಲ್ಲ ಅದು ಪ್ರೇರಣಾದಾಯಿ" ಮಹಾದೇವ ನಾಯ್ಕ್ ಅಭಿಮಾನದಿಂದ ಹೇಳುತ್ತಿದ್ದರೆ.. ರಾಮಚಂದ್ರಣ್ಣ ಅವರ ಕಣ್ಣುಗಳಲ್ಲಿ ಮಿಂಚು ಹೊಳೆದಿತ್ತು. ಶಾರುಖ್ ಖಾನ್ ಅಭಿನಯದ ಚಲನಚಿತ್ರ ‘ಸ್ವದೇಶ’ ನೀವೆಲ್ಲ ನೋಡಿದ್ದೀರಿ. ಅದೇ ಮಾದರಿಯಲ್ಲಿ ರಾಮಚಂದ್ರ ಕನ್ನಾ ನಾಯ್ಕ್ ‘ಹಿಬ್ಬನಕೇರಿ’ಗೆ ಶಾರುಖ್ ಖಾನ್ ಎಂದರೆ ಅತಿಶಯೋಕ್ತಿ ಅಲ್ಲ. ಅಕ್ಷರಶ: ಈ ಜನರದ್ದು ಹೋರಾಟದ ಬದುಕು.

ಬೆಟ್ಟದ ತುದಿಯಿಂದ ಧುಮುಕಿ, ಕಾಡಿನ ಹಾದಿ ಸೀಳಿಕೊಂಡು ಕಣಿವೆಗೆ ಹರಿಯುವ ಜಲಧಾರೆ. ನೀರಿನ ಸೆಳೆವಿನಿಂದ ನುಣುಪಾದ ಮೇಲ್ಮೈ ಹೊಂದಿ ಮಿರಿ ಮಿರಿ ಮಿಂಚುವ ಕಪ್ಪು ಬಣ್ಣದ ಬಂಡೆಗಳು. ಇವುಗಳ ಮಧ್ಯೆ ತಂಪಾಗಿ, ಸೊಕ್ಕಿನಿಂದ ರಭಸದಲ್ಲಿ ಹರಿಯುವ ನೀರು. ಈ ನೀರಿನ ಹರಿವಿನಲ್ಲಿ ೨ ಪೈಪ್ ಫಿಲ್ಟರ್ ಅಳವಡಿಸಿಕೊಂಡು ಕುಳಿತಿವೆ. ಅಲ್ಲಿಂದ ೧.೫ ಕಿ.ಮೀ. ದೂರ ಇಳಿಜಾರಿನಲ್ಲಿ ೨೦ ಅಡಿ ಉದ್ದದ ೨೦೦ ವಿವಿಧ ಗಾತ್ರದ ಪೈಪ್ ಗಳನ್ನು ಗುಂಡಿ ತೋಡಿ ಅಳವಡಿಸಲಾಗಿದೆ. ಆ ನೀರು ಹಿಬ್ಬನಕೇರಿಯ ರಾಮಚಂದ್ರ ಕನ್ನಾ ನಾಯ್ಕ್ ಅವರ ಮನೆಗೆ ಹರಿದು ಬರುತ್ತದೆ. ಹಿತ್ತಿಲಿನಲ್ಲಿ ಅಳವಡಿಸಲಾದ ‘ಟರ್ಬೈನ್’ ಗೆ ಒಂದು ಪೈಪ್ ಜೋಡಿಸಲ್ಪಟ್ಟಿದೆ. ‘ಔಟ್ ಪುಟ್’ ವಾಲ್ವ್ ಬಂದು ಮಾಡಿ ‘ಇನ್ ಪುಟ್’ ವಾಲ್ವ್ ನಾಯ್ಕ್ ತಿರುಗಿಸುತ್ತಾರೆ. ಬೆಟ್ಟದ ಝರಿಯ ನೀರು ನೈಸರ್ಗಿಕ ಒತ್ತಡದಿಂದಾಗಿ ರಭಸದಲ್ಲಿ ಪೈಪ್ ಮೂಲಕ ಹರಿದು ಬಂದು ಟರ್ಬೈನ್ ಚಕ್ರ ತಿರುಗುವಂತೆ ಮಾಡುತ್ತದೆ. ಕ್ಷಣಾರ್ಧದಲ್ಲಿ ೮ ವೋಲ್ಟ್ ವಿದ್ಯುತ್ ಉತ್ಪತ್ತಿಯಾಗಿ ಇಡೀ ಮನೆ ೬ ಫ್ಲೋರೋಸೆಂಟ್ ಬಲ್ಬ್ ಗಳಿಂದ ಪಕ್ಕಾ ಬೆಳಗುತ್ತದೆ! ಇನ್ನೊಂದು ಪೈಪ್ ನೀರಾವರಿ ಸ್ಪ್ರಿಂಕ್ಲರ್ ಗೆ ಅಳವಡಿಸಲಾಗಿದ್ದು, ಯಾವುದೇ ಬಾಹ್ಯ ಒಟ್ಟಡವಿಲ್ಲದೇ ನೈಸರ್ಗಿಕವಾಗಿ ಅದು ಇಡೀ ತೋಟಕ್ಕೆ ೩೬೦ ಡಿಗ್ರಿ ಚಿಮ್ಮಿ ನೀರುಣಿಸುತ್ತದೆ!

ಜೋಗದಿಂದ ಕಾರ್ಗಲ್ ೭ ಕಿ.ಮೀ. ಕಾರ್ಗಲ್ ದಿಂದ ಕಾನೂರುಕೋಟೆ ೩೭ ಕಿ.ಮೀ.ಗಳು. ಅಲ್ಲಿಂದ ೭ ಕಿ.ಮೀ. ಕಾಲು ದಾರಿ ಹಿಬ್ಬನಕೇರಿ. ಜನರೇ ಸತತ ೨ ವರ್ಷಗಳು ಶ್ರಮದಾನ ಮಾಡಿ ನಿರ್ಮಿಸಿದ ಮಣ್ಣಿನ ರಸ್ತೆ ಅದು. ಶರಾವತಿ ಅಭಯಾರಣ್ಯದ ತಪ್ಪಲಿನಲ್ಲಿದೆ ಈ ಗ್ರಾಮ. ಶಿವಮೊಗ್ಗ ಜಿಲ್ಲೆ, ತಾಳಗುಪ್ಪ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಸಾಗರ ತಾಲೂಕಿನ ಕಡೆಯ ಹಳ್ಳಿ. ೨೦೦ ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ, ೩೪ ಕುಟುಂಬಗಳು ಬಾಳುತ್ತಿರುವ ಕಾಡಿನ ಹಳ್ಳಿ.ಹಿಬ್ಬನಕೇರಿ, ಮುಂಡ್ವಾಳ ಮಜಿರೆಗಳು ಸೇರಿ ಬಾನಕೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತವೆ.ಇಲ್ಲಿಂದ ೧೭ ಕಿ.ಮೀ ದೂರದ ಹಳ್ಳಿ ಬಿಳಿಗಾರಿನ ನಾರಾಯಣ ಸದಸ್ಯರಾಗಿದ್ದಾರೆ. ಸಾಗರ ಪಕ್ಕದ ಕುಗ್ವೆ ಗ್ರಾಮದ ರವಿ ಕುಗ್ವೆ ಜಿಲಾ ಪಂಚಾಯಿತಿ ಸದಸ್ಯರಾಗಿದ್ದಾರೆ. ಸಾಗರದ ಗೋಪಾಲಕೃಷ್ಣ ಬೀಳೂರು ಈ ಭಾಗದ ಶಾಸಕರು.

ಮೂಲಭೂತ ಸೌಕರ್ಯ ಪ್ರಶ್ನೆಯೇ ಇಲ್ಲ. ಸರಕಾರ ಕಲ್ಪಿಸುವ ಮಾತೂ ಇಲ್ಲ. ಕಾರಣ ನೂರೆಂಟು ತಾಂತ್ರಿಕ ಹಾಗು ಆಡಳಿತಾತ್ಮಕ ತೊಂದರೆಗಳು. ಸರಕಾರ ಶರಾವತಿ ಹಿನ್ನೀರಿನ ಫಲವಾಗಿ ಒಕ್ಕಲೆಬ್ಬಿಸಿದ ಜನರಿಗೆ ಪುನರ್ವಸತಿ ಕಲ್ಪಿಸಲು ಈ ಜಾಗೆ ಬಳಸಿಕೊಂಡಿದೆ. ಸರಕಾರ ಸಾಗುವಳಿ ಮಾಡಿಕೊಳ್ಳಲು ಕೊಟ್ಟ ಪಟ್ಟಾ ಭೂಮಿ ೩ ಎಕರೆ ಮಿಕ್ಕುವುದಿಲ್ಲ. ಆದರೆ ಅಕ್ರಮ-ಸಕ್ರಮ ಮಾದರಿಯಲ್ಲಿ ೧೦ ರಿಂದ ೧೨ ಎಕರೆ ಅರಣ್ಯ ಭೂಮಿಯನ್ನು ಜನ ಸಾಗುವಳಿ ಮಾಡಿಕೊಂಡಿದ್ದಾರೆ. ಇದು ಅರಣ್ಯ ಇಲಾಖೆಯ ಕಣ್ಣನ್ನು ಸಹಜವಾಗಿಯೇ ಕೆಂಪಾಗಿಸಿದೆ. ಅಡಿಕೆ, ಬಾಳೆ, ತೆಂಗು, ಗೇರು, ಮಾವು, ಹಲಸು, ಪಪ್ಪಾಯಿ ಸೇರಿದಂತೆ ಭತ್ತ, ವೆನಿಲ್ಲಾ, ಎಲೆ ಹಾಗು ಸಾಂಬಾರ ಪದಾರ್ಥ ಮತ್ತು ತರಕಾರಿ ಇಲ್ಲಿನ ಜನ ಬೆಳೆದುಕೊಳ್ಳುತ್ತಾರೆ. ಸರಕು ಸಾಗಣೆಗೆ ದುಪ್ಪಟ್ಟು ಹಣ ತೆತ್ತು ಸಾಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಒಯ್ದು ಫಸಲು ಮಾರಾಟ ಮಾಡಲಾಗುತ್ತಿದೆ. ೩ ವರ್ಷಗಳ ಕೆಳಗೆ ಕಾಲು ದಾರಿಯಲ್ಲಿ ತಲೆ ಮೇಲೆ ಹೊತ್ತು ಕಾನೂರುಕೋಟೆಯ ವರೆಗೆ ಸಾಗಿಸುತ್ತಿದ್ದರು ಇಲ್ಲಿನ ಮಣ್ಣಿನ ಮಕ್ಕಳು.
ಹೀಗೆ ರೋಚಕ ವಿಷಯಗಳನ್ನು ಕಿಲಾರದ ವಾಸುದೇವ ನಾಯ್ಕ್ (ಸಂಪೂರ್ಣ ಸಾವಯವ ಗ್ರಾಮದ ರುವಾರಿ ಹಾಗು ಅಕ್ಷಯ ಜೀವನ ಕಿಲಾರದ ಕಾರ್ಯದರ್ಶಿ) ನಮಗೆಲ್ಲ ದಾರಿಯುದ್ದಕ್ಕೂ ವಿವರಿಸುತ್ತ ಹೊರಟಿದ್ದರು. ಚಿಕ್ಕ ಮಣ್ಣಿನ ರಸ್ತೆಯನ್ನು ಸೀಳಿಕೊಂಡು ಇಳಿಜಾರಿನಲ್ಲಿ ಜಾರುವಂತೆ ಮಾರುತಿ ಕಾರು ಬೆಟ್ಟ ಇಳಿಯುತ್ತಿತ್ತು. ಹಿಬ್ಬನಕೇರಿ ನಮಗೆಲ್ಲ ಜಗತ್ತಿನ ೮ನೇ ವಿಸ್ಮಯವಾಗಿ ಪರಿಣಮಿಸಿತ್ತು. ಮಧ್ಯಾನ್ಹ ೧೨ ಗಂಟೆಯ ಸಮಯ..ಆದರೂ ರಸ್ತೆಯುದ್ದಕ್ಕೂ ಮಬ್ಬು ಬೆಳಕು. ಕಾರಿನ ಸಾರಥಿ ನನ್ನ ಅಣ್ಣ ಸೋಮಣ್ಣ ಕಾರಿನ ಒಳಗೂ, ಹೊರಗೂ ಧೂಳು ಅಡರುತ್ತಿದ್ದ ರೀತಿ, ಇಕ್ಕಟ್ಟಾದ ರಸ್ತೆಯಲ್ಲಿ ತುಸು ಆಯ ತಪ್ಪಿದರೂ ಪ್ರಪಾತಕ್ಕೆ ಬೀಳಬಹುದಾದ ಸ್ಥಿತಿ, ಎಲ್ಲ ಆಗಾಗ ನೆನೆಯುತ್ತಿದ್ದ. "ಇನ್ನೂ ಇಂಥಾ ಎಷ್ಟ ಹಳ್ಳಿ ತೋರಸಬೇಕು ಅಂತ ಮಾಡಿ?" ಎಂದು ಕಾಲೆಳೆಯುತ್ತಿದ್ದ. ಮಿತ್ರ ಲಿಂಗರಾಜ "ನಿನ್ನ ಜೀವನ ಪೂರ್ತಿ ಇದ ಆತು..ಇದನ್ನ ಬಿಟ್ಟ ಮತ್ತೇನರೆ ಮಾಡಿದ್ರ ಹೇಳಲಾ.." ಎಂದು ಕಿಚಾಯಿಸುತ್ತಿದ್ದ. ನನ್ನ ವಿದ್ಯಾರ್ಥಿ ಮಿತ್ರರುಗಳಾದ ಗಣಪತಿ ಹೆಗಡೆ ಹಾಗು ಹರೀಶಕುಮಾರ್ ಸಹ ಉತ್ಸುಕರಾಗಿದ್ದರು. ಆದರೂ ಎಲ್ಲರೂ ಪ್ರೀತಿಯಿಂದ ಆ ಹಳ್ಳಿ ಕಾಣಸಿಗುವುದನ್ನೇ ಎದುರು ನೋಡುತ್ತ ಇಕ್ಕೆಲಗಳಲ್ಲಿ ಇಣುಕು ಸೃಷ್ಟಿ ಸೌಂದರ್ಯ ಸವಿಯುತ್ತಿದ್ದೆವು. ನಿಸರ್ಗವೆಂಬ ಕೌತುಕದ ಮುಂದೆ ಮಾನವ ಎಷ್ಟು ಕುಬ್ಜ ಎಂದು ಭಾಸವಾಗುತ್ತಿತ್ತು.

ವಾಸು ಅಣ್ಣ ಪಕ್ಕದಲ್ಲಿ ಕಾರು ನಿಲ್ಲಿಸುವಂತೆ ಸೂಚನೆ ಕೊಟ್ಟರು. "ಇನ್ನು ಇಳಿದು ನಡೆಯುವಾ.. ಕಾರು ಆಚೆ ಬದಿಗೆ ಹೋಗದು" ಎಂದರು. ನೀರವವಾಗಿ ಹರಿಯುತ್ತಿದ್ದ ಹಿಬ್ಬನಕೇರಿಯ ಹಳ್ಳವನ್ನು ದಾಟಿ ಮತ್ತೆ ಗುಡ್ಡ ಹತ್ತಿದೆವು. ಅರ್ಧ ಕಿ.ಮೀ. ಅಂತರದಲ್ಲಿ ರಾಮಚಂದ್ರ ನಾಯ್ಕ್ ಅವರ ಮನೆ ಕಾಣಿಸಿತು. ದೂರದಿಂದಲೇ ಮನೆಗೆ ಸೋಲಾರ್ ಅಳವಡಿಕೆಯಾಗಿರುವುದು, ಡಿ.ಟಿ.ಎಚ್ ಡಿಸ್ಕ್ ಅಣಿಗೊಳಿಸಿರುವುದು ಕಾಣಿಸಿತು. ಖುಷಿಯಿಂದ ಬಂದ ರಾಮಚಂದ್ರ ನಾಯ್ಕ್ ಹತ್ತಾರು ವರ್ಷಗಳ ಪರಿಚಯವಿದ್ದಂತೆ ಕುಶಲ ಕೇಳಿ, ದೊಡ್ಡ ಗುಣ ಮೆರೆದರು. ಕಾಲಿಗೆ ನೀರು ಕೊಟ್ಟು, ವಸ್ತ್ರ ನೀಡಿ ಸ್ವಾಗತಿಸಿದರು. ಕಾಡು ಬಾಳೆ, ಜಂಬು ಹಣ್ಣು ನಮ್ಮ ಆತಿಥ್ಯಕ್ಕೆ ಕಾಯ್ದಿದ್ದವು. ವಾಸು ಅಣ ನಮ್ಮೆಲ್ಲರನ್ನು ಅವರಿಗೆ ಪರಿಚಯಿಸಿದರು.

ರಾಮಚಂದ್ರ ನಾಯ್ಕ್ ನಮ್ಮೊಂದಿಗೆ ಮಾತಿಗಿಳಿದರು. ಅವರ ತಂದೆ ಕನ್ನ ನಾಯ್ಕ್ ಅವರು ಒಡೆಯರ ಕೈ ಕೆಳಗೆ ಜೀವನ ಪೂರ್ತಿ ಜೀತದಾಳಾಗಿ ದುಡಿದವರು. ಆದರೆ ಆ ಚಾಕರಿ ರಾಮಣ್ಣ ಅವರಿಗೆ ಬೇಕಿರಲಿಲ್ಲ. ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ತಾವೇ ಆಯ್ದುಕೊಂಡು ಸರಕಾರದಿಂದ ಪಟ್ಟಾ ಭೂಮಿ ಪಡೆದು ಇಲ್ಲಿಗೆ ಬಂದಿದ್ದಾಗಿ ಹೇಳಿದರು. ಹತ್ತಾರು ವರ್ಷಗಳ ಕಾಲ ಕತ್ತಲೆ ಹಾಗು ಚಿಮಣಿ ದೀಪದಲ್ಲಿ ಕಾಲು ನೂಕಿದ ನಂತರ ಕೊಲ್ಲೂರಿಗೆ ಹೋಗುವ ಅವಕಾಶ ಸಿಕ್ಕಿತು. ಅಲ್ಲಿ ಓರ್ವರು ಬೆಟ್ಟದ ತುದಿಯ ಝರಿ ನೀರಿಗೆ ಪೈಪ್ ಅಳವಡಿಸಿ, ಸಣ್ಣ ಟರ್ಬೈನ್ ಮೂಲಕ ವಿದ್ಯುತ್ ಉತ್ಪಾದಿಸಿಕೊಂಡು ಮನೆಗೆ ಬಳಸುತ್ತಿದ್ದ ರೀತಿ ಇವರಿಗೆ ಮೋಡಿ ಮಾಡಿತು. ತಾವು ಏಕೆ ಈ ಪ್ರಯೋಗ ಕೈಗೊಳ್ಳ ಬಾರದು ಎಂದು ಯೋಚಿಸಿದರು.

ಈ ಸಂದರ್ಭದಲ್ಲಿ ಅವರ ನೆರವಿಗೆ ಬಂದವರು ಸಿಗಂದೂರು ಸಮೀಪದ ಗೊರಗೋಡಿನ ಸತ್ಯ ಅವರು. ೨೦೦೪ರಲ್ಲಿ ಅವರ ತಾಂತ್ರಿಕ ಸಹಾಯದಲ್ಲಿ ೭ ಸಾವಿರ ರುಪಾಯಿ ಖರ್ಚಿಸಿ ಟರ್ಬೈನ್ ಖರೀದಿಸಿದ್ದಾಯಿತು. ನಂತರ ೧೮ ಸಾವಿರ ರುಪಾಯಿ ಖರ್ಚಿಸಿ ಬೆಟ್ಟದ ತುದಿಯಿಂದ ಮನೆಯ ವರೆಗೆ ಪೈಪ್ ಲೈನ್ ಅಳವಡಿಸಿದ್ದಾಯಿತು. ಅಂತೂ ೨೫ ಸಾವಿರ ರುಪಾಯಿಗಳ ಒಟ್ಟು ವೆಚ್ಚದಲ್ಲಿ ಮನೆಗೆ ವಿದ್ಯುತ್ ಹರಿಯಿತು. ಅಂದಹಾಗೆ ವಿಶೇಷವೆಂದರೆ ಅವರ ಸಮುದಾಯ ಕಾಳಜಿ. ಹಿಬ್ಬನಕೇರಿಯಲ್ಲಿ ಈ ಪ್ರಯೋಗ ಮಾಡಲು ಉಳಿದವರಿಗೂ ಪ್ರೇರಣೆ ನೀಡಿದವರು ರಾಮಚಂದ್ರ ನಾಯ್ಕ್. ಹಾಗಾಗಿ ಅವರ ಮನೆ ಮಾತ್ರವಲ್ಲ..ಹತ್ತಾರು ಮನೆಗಳ ದೀಪ ಪ್ರಥಮ ಬಾರಿಗೆ ಬೆಳಗಲು ಆರಂಭಿಸಿದ್ದು ಹೀಗೆ. ಈಗ ಟರ್ಬೈನ್ ದೀಪ ಉರಿಯುತ್ತಿರುವುದು ೫ ಮನೆಗಳಲ್ಲಿ. ನಾಯ್ಕ್ ಹೇಳಿದರು.."ಕಳೆದ ೫ ವರ್ಷಗಳಲ್ಲಿ ಯಾವ ರಿಪೇರಿ, ನಿರ್ವಹಣೆ ಖರ್ಚಿಲ್ಲ. ಒಟ್ಟು ೮ ವೋಲ್ಟ್ ಕರೆಂಟ್ ಸಿಗ್ತದೆ. ೬ ಬಲ್ಬ್ ಉರಿತಾವೆ. ಸಂಜೆ ೬ ರಿಂದ ರಾತ್ರಿ ೧೧.೩೦ರ ವರೆಗೆ ಉರಿಸ್ತೇವೆ. ತಪ್ಪು ತಿಳೀಬೇಡಿ ಟಿ.ವಿ. ಇದರಿಂದ ಉರಿಯೋಲ್ಲ. ಹಾಗಾಗಿ ಮನೆ ಸೂರಿನ ಮೇಲೆ ಸೋಲಾರ್ ಛತ್ರಿ ಅಂಟಿಸಿರೋದು. ನನ್ನ ಮೋಬೈಲ್..ಬೇಕಿದ್ರೆ ನಿಮ್ಮ ಕ್ಯಾಮೆರಾ ಚಾರ್ಜ್ ಮಾಡಿಕೋಬಹುದು" ಎಂದರು ಉತ್ಸಾಹದಿಂದ. ಅಷ್ಟೇ ಅಲ್ಲ. ಕರೆಂಟ್ ಉತ್ಪತ್ತಿಸಲು ಬಳಸಿದ ನೀರು ಪೋಲಾಗದಂತೆ ಮತ್ತೆ ಭತ್ತದ ಗದ್ದೆಗೆ ಹರಿಸಿಕೊಂಡು ಅವರು ಕೃಷಿ ಕೈಗೊಳ್ಳುತ್ತಾರೆ. ಅವಶ್ಯಕತೆಗೆ ತಕ್ಕಷ್ಟು ಮಾತ್ರ ವ್ಯವಸ್ಥಿತವಾಗಿ ನೀರಿನ ಬಳಕೆ, ಅಪವ್ಯವ ಇಲ್ಲ.

ಬ್ಯಾಟರಿ ವ್ಯವಸ್ಥೆ ಮಾಡಿಕೊಂಡಿಲ್ಲವೇ? ಅಣ್ಣ ಸೋಮಣ್ಣ ನಾಯ್ಕ್ ಅವರನ್ನು ಪ್ರಶ್ನಿಸಿದ. "ನೋಡ್ರಿ..೫ ಕಿ.ಮೀ ಆ ಬ್ಯಾಟರಿಗಳನ್ನ ಹೊತ್ತುಕೊಂಡು ಬರೋದು ಹ್ಯಾಗೆ? ಹೋಗಲಿ ರಿಪೇರಿ ಬಂದ್ರೆ ಮತ್ತೆ ಸಾಗರಕ್ಕೆ ಒಯ್ಯೋದು ಹೇಗೆ? ಮೇಲಾಗಿ..ನಮಗೆ ಕರೆಂಟ್ ಕಾದಿಡೋ ಪ್ರಶ್ನೆ ಇಲ್ಲ. ಝರಿಯಲ್ಲಿ ನೀರು ಇರೋ ವರೆಗೂ ನಮಗೆ ಕರೆಂಟ್ ತೊಂದರೆ ಇಲ್ಲ. ಇಲ್ಲಿಯವರೆಗೆ ಝರಿ ನೀರು ಇಂಗಿಯೇ ಇಲ್ಲ. ಹಾಗಾಗಿ ಆ ಸರ್ಕಸ್ ಬೇಕಿಲ್ಲ" ಅಂದ್ರು. "ಚಿರಂಜೀವಿ ಸಿಂಗ್ ನೇತೃತ್ವದ ಆಯೋಗ ನಕ್ಸಲ್ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿದ್ದು ನಿಮಗೆಲ್ಲ ಗೊತ್ತಲ್ಲ?". ರಾಮಚಂದ್ರಣ್ಣ ನಮ್ಮನ್ನೇ ಆ ಕುರಿತು ಪ್ರಶ್ನಿಸಿದರು. "ಹಿಬ್ಬನಕೇರಿಯಿಂದ ೫ ಕಿ.ಮೀ ದೂರದಲ್ಲಿರೋ ಕಾನೂರಿಗೆ ಸರಕಾರ ನಕ್ಸಲ್ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ನಮ್ಮ ಹಿಬ್ಬನಕೇರಿ ಆ ಪಟ್ಟಿಯಲ್ಲಿ ಬರೋಲ್ಲವಂತೆ! ಅದರಂತೆ ಕಾನೂರಿನ ಜನರ ಅಭಿವೃದ್ಧಿ ಸಾಗಿದೆ. ನಾವು ಮನುಷ್ಯರಲ್ಲವಾ?" ಅಂದ್ರು. ಉತ್ತರ ನಮ್ಮಲ್ಲಿರಲಿಲ್ಲ.

ಸಂಬಂಧಪಟ್ಟ ಎಲ್ಲರನ್ನೂ ಭೇಟಿ ಮಾಡಿ ಈ ವಿಷಯ ಮನವರಿಕೆ ಮಾಡಿಸಿದ್ದಾಗಿ ಹೇಳಿದರು. "ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ನೀಡಿ ವೋಟ್ ಹಾಕಿಸಿಕೊಂಡಿದ್ದು ಬಿಟ್ರೆ ಆಮೇಲೆ ನಮ್ಮವರು ಯಾರೂ ಈ ಊರಿಗೆ ಕಾಲಿಡಲಿಲ್ಲ. ಊರ ದೈವ ಸೋಮೇಶ್ವರನ ಮೇಲೆ ಆಣೆ ಮಾಡಿ ರಸ್ತೆ ಮಾಡಿಸಿಕೊಡುವುದಾಗಿ ಹೇಳಿದ್ರು ನೋಡಿ" ಎಂದು ರಾಮಚಂದ್ರಣ್ಣ ಸಿಟ್ಟಿನಿಂದ ಹೇಳಿದರು.









Monday, February 2, 2009

ಸಾಧನೆ ಇಲ್ಲಿ ‘ಮಾನದಂಡ’ವಲ್ಲ..ಸಾಧಕರ ‘ಮಾನವೇ ದಂಡ’..!

"ಡಾ. ವರ್ಗಿಸ್ ಕುರಿಯನ್ ಕಡೆಯದಾಗಿ ನಿಮಗೊಂದು ಪ್ರಶ್ನೆ.. ಭವಿಷ್ಯದಲ್ಲಿ ನಿಮ್ಮ ಯೋಜನೆಗಳೇನು?"

ಕೆಲ ದಿನಗಳ ಹಿಂದೆ ಓರ್ವ ಉತ್ಸಾಹಿ ಯುವ ಪತ್ರಕರ್ತ ಈ ಪ್ರಶ್ನೆ ಕೇಳಿದ್ದ.

ಡಾ. ಕುರಿಯನ್ ಹೇಳಿದ್ದರು.."ಈ ವಯಸ್ಸಿನಲ್ಲಿ, ನಿಜವಾಗಿಯೂ ವ್ಯಕ್ತಿಗೆ ಭವಿಷ್ಯವಿಲ್ಲ. ಅವನಿಗಿರುವುದು ಭೂತಕಾಲ ಮಾತ್ರ."
ಭಾರತದ ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿಟ್ರೋಡಾ ಅಭಿಪ್ರಾಯಪಟ್ಟಂತೆ, ಕುರಿಯನ್ ಓರ್ವ ಹುಚ್ಚ. ಹಾಗೆ ಆ ‘ಹುಚ್ಚು’ ಹಿಡಿದಿದ್ದರಿಂದ ಅವರಿಗೆ ಮಹಾತ್ಸಾಧನೆ ಮಾಡಲು ಸಾಧ್ಯವಾಯಿತು. ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಹೇಳುತ್ತಾರೆ.. ‘ಈ ಕುರಿಯನ್ ಅವರಂತೆ ಇನ್ನೊಂದು ಸಾವಿರ ಕುರಿಯನ್ ಗಳು ಇದ್ದಿದ್ದರೆ ಭಾರತದಲ್ಲಿ ಹಾಲಿನ ಹೊಳೆ ಹರಿಸುವುದು ಕಷ್ಟವಾಗುತ್ತಿರಲಿಲ್ಲ.ಸದ್ಯ ಗುಜರಾತನಲ್ಲಿ ಮಾತ್ರ ಹಾಗೆ ಹರಿಸಲು ಸಾಧ್ಯವಾಗಿದೆ.’
ಮುಂಬೈ-ದೆಹಲಿ ರಾಷ್ಟ್ರೀಯ ಹೆದ್ದಾರಿಯ ಬರೋಡಾದಿಂದ ಸುಮಾರು ೪೦ ಕಿ.ಮೀ ದೂರದಲ್ಲಿ, ಎದ್ದು ಕಾಣದ ತಿರುವಿನಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಸಾಧಾರಣ ಫಲಕ ಆನಂದ ಕಡೆಗೆ ಬಾಣದ ಗುರುತು "ಭಾರತದ ಕ್ಷೀರ ರಾಜಧಾನಿ" ಎಂದು ಸಾರುತ್ತದೆ. ಅದು ಸಾಗುವುದು ಹೈನುಗಾರರನ್ನು ಪ್ರತಿನಿಧಿಸುವ ಹಾಗು ಸೇವೆ ಮಾಡುತ್ತಿರುವ ಅಮೂಲ್, ಗುಜರಾತ ಕೋ-ಆಪರೇಟಿವ್ ಮಿಲ್ಕ್ ಮಾರ್ಕೇಟಿಂಗ್ ಫೆಡರೇಷನ್, ನ್ಯಾಶನಲ್ ಡೈರಿ ಡೆವೆಲಪ್ ಮೆಂಟ್ ಬೋರ್ಡ್, ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ ಮೆಂಟ್, ನ್ಯಾಷನಲ್ ಕೋ-ಆಪರೇಟಿವ್ ಡೈರಿ ಫೆಡರೇಷನ್ ಆಫ್ ಇಂಡಿಯಾ ಕಚೇರಿಗಳ ಸಮುಚ್ಚಯಗಳ ಕಡೆಗೆ . ಹಾಗಾಗಿ ಈ ಪುಟ್ಟ ಊರು ಜಾಗತಿಕ ಭೂಪುಟದಲ್ಲಿ ಅಗ್ರಗಣ್ಯ ಊರು. ಗ್ರಾಮೀಣಾಭಿವೃದ್ಧಿ ಎಂದರೆ ಏನು? ಎಂಬುದರ ಸಮರ್ಥ ಪರಿಭಾಷೆ ಆನಂದ. ರುವಾರಿ ಪದ್ಮವಿಭೂಷಣ ಡಾ.ವರ್ಗಿಸ್ ಕುರಿಯನ್.

ಇಂದಿನ ೮೭ ವರ್ಷದ ಜ್ಞಾನವೃದ್ಧ ಕುರಿಯನ್ ಗುಜರಾತದ ಆನಂದದಲ್ಲಿ ತಾವು ಉತ್ಪಾದಿಸಿದ ಹಾಲನ್ನು ಮಾರಲು ಹೈನುಗಾರರ ಸಣ್ಣ ಗುಂಪೊಂದು ಮಾಡಿಕೊಂಡಿದ್ದ ಕೈರಾ ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಮಿಲ್ಕ್ ಪ್ರೊಡ್ಯುಸರ್ಸ್ ಯೂನಿಯನ್ ಲಿಮಿಟೆಡ್ (ಈಗ ಅಮೂಲ್) ನಲ್ಲಿ ಸೇವಾಕಾಂಕ್ಷಿಯಾಗಿ ಬಂದು ಸೇರಿದ್ದೇ ತೀರ ಆಕಸ್ಮಿಕ. ಆ ಗುಂಪಿನ ನಾಯಕ ತ್ರಿಭುವನದಾಸ್ ಪಟೇಲರ ಪ್ರಾಮಾಣಿಕತೆ ಹಾಗು ಬದ್ಧತೆಯನ್ನು ಕಂಡು ಕುತೂಹಲ ಕೆರಳಿ ಅವರೊಡನೆ ಕುರಿಯನ್ ಬಂದು ಸೇರಿದರು.


‘ಆನಂದ’ ದಲ್ಲಿ ಸರಕಾರ ನಡೆಸುತ್ತಿದ್ದ ಬೆಣ್ಣೆ ಕಾರ್ಖಾನೆಯಿಂದ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಕುರಿಯನ್ ನಂತರ ಕೈರಾ ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಮಿಲ್ಕ್ ಪ್ರೊಡ್ಯೂಸರ್ಸ್ ಯೂನಿಯನ್ ಲಿಮಿಟೆಡ್ ಸೇರಿದರು. ನ್ಯಾಷನಲ್ ಡೈರಿ ಡೆವೆಲಪ್ ಮೆಂಟ್ ಬೋರ್ಡಿನ ಅಧ್ಯಕ್ಷರಾಗಿ ‘ಹೊನಲು ಕಾರ್ಯಾಚರಣೆ’ಯನ್ನು ಕಾರ್ಯಗತ ಮಾಡಿದರು. ಈಗ ಸದ್ಯ ಭಾರತ ಸರಕಾರ ಅಲಹಾಬಾದ್ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ೨೦೦೬ ರಿಂದ ೫ ವರ್ಷಗಳ ಅವಧಿಗೆ ನೇಮಕ ಮಾಡಿದೆ.


ಅವರ ಕತೃತ್ವ ಶಕ್ತಿ, ಅಸಾಧಾರಣ ಕೊಡುಗೆಗಳನ್ನು ನಾಡು ಗುರುತಿಸಿದ್ದು ವಿಶೇಷ. ಫಿಲಿಪೀನ್ಸ್ ದೇಶ ತನ್ನ ರೆಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ೧೯೬೩ರಲ್ಲಿ ಕೊಡಮಾಡಿದ ಮೇಲೆ ಭಾರತ ಸರಕಾರ ತನ್ನ ಮಣ್ಣಿನ ಮಗನ ಕೊಡುಗೆ ಗಮನಿಸಿತು. ೧೯೬೫ರಲ್ಲಿ ಪದ್ಮಶ್ರೀ, ೧೯೬೬ರಲ್ಲಿ ಪದ್ಮಭೂಷಣ ಹಾಗು ೧೯೭೪ರಲ್ಲಿ ಗ್ಲಾಸ್ಗೋ ವಿಶ್ವವಿದ್ಯಾಲಯದಿಂದ ‘ಡಾಕ್ಟರ್ ಆಫ್ ಲಾ’ ಗೌರವ ಉಪಾಧಿ, ೧೯೮೬ರಲ್ಲಿ ವಾಟೆಲ್ ಶಾಂತಿ ಪುರಸ್ಕಾರ, ೧೯೮೯ರಲ್ಲಿ ವಿಶ್ವ ಸಂಸ್ಥೆಯ ವಿಶ್ವ ಆಹಾರ ಪ್ರಶಸ್ತಿ ಪ್ರಮುಖವಾದವು.


ನಾಲ್ವರು ಮಕ್ಕಳಲ್ಲಿ ಮೂರನೇಯವರಾಗಿ ಕೇರಳದ ಕಲ್ಲಿಕೋಟೆಯಲ್ಲಿ ೨೬ ನವೆಂಬರ್ ೧೯೨೧ ರಲ್ಲಿ ಕುರಿಯನ್ ಜನಿಸಿದರು. ಅವರ ಚಿಕ್ಕಪ್ಪ ರಾವ ಸಾಹೇಬ್ ಪಿ.ಕೆ.ವರ್ಗಿಸ್ ತನ್ನ ಹುಟ್ಟೂರು ಎರ್ನಾಕುಲಂ ಗೆ ಸಾಕಷ್ಟು ಸೇವೆ ಸಲ್ಲಿಸಿ ಖ್ಯಾತರಾಗಿದ್ದರಿಂದ ಇವರಿಗೆ ‘ವರ್ಗಿಸ್’ ಎಂದು ನಾಮಕರಣ ಮಾಡಲಾಯಿತು. ತಂದೆ ಪುತೆನ್ ಪರಾಕ್ಕಲ್ ಕುರಿಯನ್ ಬ್ರಿಟೀಷರ ಕಾಲದ ಕೊಚ್ಚಿನ್ ನಲ್ಲಿ ಸಿವಿಲ್ ಸರ್ಜನ್ ಆಗಿದ್ದರು. ತಾಯಿ ತುಂಬ ಪ್ರತಿಭಾವಂತರು ಹಾಗು ಪಿಟೀಲು ವಾದಕರಾಗಿದ್ದರು.


ಭಾರತ ಸರಕಾರದ ಗೃಹ ಮಂತ್ರಾಲಯದಿಂದ ಸ್ಕಾಲರ್ ಶಿಪ್ ಪಡೆದು ಅಮೇರಿಕೆಗೆ ವಿಶೇಷ ಅಧ್ಯಯನಕ್ಕೆ ಕುರಿಯನ್ ತೆರಳಿದ್ದರು. ಆಗ "ನಿಮ್ಮ ದೇಶದ ಹಾಲು ನಮ್ಮ ದೇಶದ ಗಟಾರಿನಲ್ಲಿ ಹರಿಯುವ ನೀರಿಗಿಂತ ಹೊಲಸು ಮತ್ತು ಕೆಳಮಟ್ಟದ್ದು" ಎಂಬ ಬ್ರಿಟೀಷ್ ಪ್ರಜೆಯೊಬ್ಬನ ಹಿಯಾಳಿಕೆಯ ಮಾತಿಗೆ ತಕ್ಕ ಉತ್ತರ ನೀಡುವ ಛಲದೊಂದಿಗೆ ಹೋರಾಟಕ್ಕೆ ಸಜ್ಜಾದವರು ವರ್ಗಿಸ್ ಕುರಿಯನ್. ಆ ಮಾತನ್ನು ಛಲವಾಗಿ ಸ್ವೀಕರಿಸದೇ ಹೋಗಿದ್ದರೆ ವಿದೇಶದಲ್ಲಿ ಅತ್ಯುನ್ನತ ಹುದ್ದೆಯಲ್ಲಿ ಅವರು ಇಂದು ವಿರಾಜಮಾನರಾಗಬೇಕಿತ್ತು. ದೇಶ ಪ್ರೇಮ ಈ ‘ಸಿರಿಯನ್ ಕ್ರಿಷ್ಚಿಯನ್’ ಮಹಾನುಭಾವನನ್ನು ಇಲ್ಲಿಗೆ ತಂದಿಟ್ಟಿತು.


ಕಳೆದ ಶನಿವಾರ ಗುಜರಾತ ಶಾಸಕನೊಬ್ಬ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಮಾಧ್ಯಮ ಗೋಷ್ಠಿಯಲ್ಲಿ ಅದನ್ನು ಬಿಡುಗಡೆಗೊಳಿಸಿ, ಕುರಿಯನ್ ಅವರಿಗೆ ರಾಜ್ಯ ಸರಕಾರ ನೀಡುತ್ತಿರುವ ಎಲ್ಲ ಸೌಕರ್ಯ ಹಾಗು ಸೌಲಭ್ಯಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ತನ್ನ ಆಕ್ಷೇಪ ಸೂಚಿಸಿದ್ದಾನೆ. ತೀರ ಆರ್ಥಿಕ ಸಂಕಷ್ಠದ ಈ ಪರಿಸ್ಥಿತಿಯಲ್ಲೂ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಕಂಪೆನಿಗಳೊಂದಿಗೆ ೩೬೮೫ ಒಡಂಬಡಿಕೆಗಳಿಗೆ ಸಹಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದಲಾಲ್ ಸ್ಟ್ರೀಟ್ ಮಾಸಿಕ ವರದಿ ಮಾಡಿದೆ. ಈ ಹಣ್ಣುಗಳು ಆ ರಾಜ್ಯವನ್ನು ಕಳೆದ ೫ ದಶಕಗಳಲ್ಲಿ ಕಟ್ಟಿದ ಕುರಿಯನ್ ಅವರಂತಹ ಮಹಾನುಭಾವರಿಂದ ಮೋದಿ ಸರಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂಬುವುದರಲ್ಲಿ ಸಂದೇಹವಿಲ್ಲ.


೩ ಲಕ್ಷ ೫೦ ಸಾವಿರ ಹೈನುಗಾರ ಕುಟುಂಬಗಳಿಗೆ ಜೀವನ ಭದ್ರತೆ ಕಲ್ಪಿಸಿದ, ಗ್ರಾಮಕ್ಕೆ ಸ್ವರಾಜ್ಯ ಕಲ್ಪಿಸಿಕೊಟ್ಟ ಮಹಾನುಭಾವನಿಗೆ ಆ ರಾಜ್ಯ ನಡೆಸಿಕೊಳ್ಳುವ ಪರಿಯೇ ಇದು?
ಯಾವ ಮಾಧ್ಯಮ? ಯಾವ ವೇದಿಕೆ? ಯಾವ ಸಂಘಟನೆ? ಹೋಗಲಿ ಯಾವ ಜನಪ್ರತಿನಿಧಿ ಬೀದಿಗಿಳಿದು ಹೋರಾಡುವುದು ಬಿಡಿ..ಕೊನೆ ಪಕ್ಷ ಖಂಡಿಸುವ ಪ್ರಯತ್ನ ಮಾಡಿದರು? ಬದುಕು ಕಟ್ಟುವ ದೇಶ ಭಕ್ತರಿಗಿಂತ ಬೆಳ್ಳಿ ಪರದೆಯ ಹೋರಾಟಗಾರರಿಗೆ, ಪಾಶ್ಚಿಮಾತ್ಯರನ್ನು ಓಲೈಸುವ ಬೌದ್ಧಿಕ ಮಾರ್ಜನಕ್ಕೆ ಮನ್ನಣೆ ಈಗ ಮಾಧ್ಯಮ, ಸಮಾಜ ನೀಡುತ್ತಿದೆ. ನಮ್ಮ ದೇಶವನ್ನು ತೀರ ಹೀನಾಯವಾಗಿ ಚಿತ್ರಿಸುವ ಅರವಿಂದ ಅಡಿಗರ ‘ದ ವೈಟ್ ಟೈಗರ್’, ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ, ಸದ್ಯ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಚಿದ ‘ಸ್ಲಂ ಡಾಗ್ ಮಿಲೇನಿಯರ್’, ‘ಆನ್ ಏರಿಯಾ ಆಫ್ ಡಾರ್ಕ್ ನೆಸ್’ ಬರೆದ ಸರ್ ಸೂರಜ್ ಪ್ರಸಾದ್ ನೈಪಾಲ್ ಅಂತಾರಾಷ್ಟ್ರೀಯ ಸ್ಥರದಲ್ಲಿ ಚರ್ಚೆಯಾಗಿ, ಅವರು ಹೆಕ್ಕಿದ ‘ಮುತ್ತು’ಗಳು ಪ್ರಶಸ್ತಿಗೆ ಭಾಜನವಾಗುತ್ತವೆ.


ನಾವು ಭಾರತೀಯರು ಅನಾಗರಿಕರು ಸೂಕ್ಷ್ಮತೆ ಅರಿಯದವರು, ಹಾವಾಡಿಗರು, ಕರಡಿ, ಕೋತಿ ಕುಣಿಸಿ ಹೊಟ್ಟೆ ತುಂಬಿಕೊಳ್ಳುವವರು, ಡೊಂಬರಾಟದ ಕಿಳ್ಳಿಕ್ಯಾತರು, ಮೂಢನಂಬಿಕೆಗೆ ಒಲಿದವರು, ಬಾವಾಗಳು ಎಂದೆಲ್ಲ ಚಿತ್ರಿಸುವುದು ಕ್ಷಮ್ಯ! ಸಮಾಜದ, ಮಾಧ್ಯಮಗಳ ಮನ್ನಣೆ ಸಹ ಲಭ್ಯ. ಅದೇ ಭಾರತದ ಪ್ರತಿ ಶೃದ್ಧೆ, ರಾಷ್ಟ್ರಪೇಮ ಬಿಂಬಿಸುವ ‘ಲಗಾನ್’, ‘ಚಕ್ ದೇ ಇಂಡಿಯಾ’, ‘ಇಕ್ಬಾಲ್’ ಈಗ ವಿಸಾ ನಿರಾಕರಿಸಲ್ಪಟ್ಟ ಡಾ.ಪ್ರಕಾಶ್ ಆಮ್ಟೆ ಹಾಗು ಡಾ.ಮಂದಾಕಿನಿ ಆಮ್ಟೆ (ಬಾಬಾ ಆಮ್ಟೆ ಅವರ ಮಗ, ಸೊಸೆ) ಹಾಗು ಕುರಿಯನ್ ನಮಗೂ, ನಾವು ವಾಸಿಸುವ ಸಮಾಜಕ್ಕೂ ಹಾಗು ಪೋಷಿಸುವ ಮಾಧ್ಯಮಗಳಿಗೂ ಅಪತ್ರಿಕಾ ವಾರ್ತೆ!


ದೇಶ ಸ್ವಾತಂತ್ರ್ಯ ಪಡೆದು ೬೧ ವರ್ಷಗಳು ಗತಿಸಿದರೂ ಗುಲಾಮೀ ಮಾನಸಿಕತೆ ನಮ್ಮಿಂದ ಹೋಗಲಿಲ್ಲ. ಕತ್ತೆ=ಕುದುರೆ=ಸಮಾನತೆ ಇಂದಿನ ಮಾನದಂಡಗಳು. ಹೀಗೇಕೆ? ಎಂದು ಕೇಳುವವರ ‘ಮಾನವೇ ದಂಡ’!

Tuesday, January 13, 2009

ನಮ್ಮ ರಾಮಣ್ಣ ಮಾಸ್ತರ್ ‘ಬಂಗಾರದ ಮನುಷ್ಯ’.



" BUTTERFLIES DON'T KNOW THE COLOUR OF THEIR WINGS.BUT HUMAN EYES KNOW HOW NICE IT IS.LIKE WISE DR.RAMANNA DOESN'T KNOW HOW GOOD HE IS;BUT WE- KNOW HOW SPECIAL HE IS..!"
ನಮ್ಮ ಮಾಸ್ತರ್ ರಾಮಣ್ಣ ಈಗ ‘ಕನ್ನಡಪ್ರಭ ವರ್ಷದ ವ್ಯಕ್ತಿ- ೨೦೦೮.’
ನನ್ನ ಜೀವಮಾನದಲ್ಲಿ ಯೋಗ್ಯರಿಗೆ ಪುರಸ್ಕಾರ ಸಲ್ಲುವುದನ್ನು ಇನ್ನೆಂದಿಗೂ ನೋಡಲಾರೆ ಎಂದು ಕೊಂಡಿದ್ದೆ. ಆದರೆ ಆ ಅನಿಸಿಕೆ ಇಂದು ಸುಳ್ಳಾಯಿತು. ನಂಬಿಕೆ ಸುಳ್ಳಾದಾಗಲೂ ಖುಷಿ ಪಡಬಹುದಾದ ಸುವರ್ಣ ಘಳಿಗೆಗಳು ನನ್ನಂತಹ ಅದೆಷ್ಟು ಜನರ ಜೀವನದಲ್ಲಿ ಬರಬಹುದು? ಪ್ರಶಸ್ತಿಗಳೆಲ್ಲ ಮೌಲ್ಯ ಕಳೆದುಕೊಳ್ಳುತ್ತಿರುವ ಕಾಲವಿದು. ಪ್ರಶಸ್ತಿ ಘೋಷಿಸುವವರು ಯೋಗ್ಯರನ್ನು ಗುರುತಿಸಿ, ನೀಡುವುದು ಭಗೀರಥ ಪ್ರಯತ್ನಕ್ಕಿಂತ ಒಂದು ಗುಂಜಿ ಹೆಚ್ಚೇ ಶ್ರಮದಾಯಕ.
ಕನ್ನಡಪ್ರಭ ಹಾಗು ಬಿ.ಡಿ.ಗೋಯೆಂಕಾ ಪ್ರತಿಷ್ಠಾನ ಈ ನಿಟ್ಟಿನಲ್ಲಿ ಅಪ್ಪಟ ಚಿನ್ನವನ್ನು ಶೋಧಿಸಿದೆ. ಒಂದರ್ಥದಲ್ಲಿ ಈ ಪ್ರಶಸ್ತಿಗೆ ರಾಮಣ್ಣ ಮೌಲ್ಯ ತಂದಿದ್ದಾರೆ.ಕೆಲವರಿಗೆ ಪ್ರಶಸ್ತಿ ಬಂದ ಮೇಲೆ ಮೌಲ್ಯ ಬರುತ್ತದೆ..! ಉದಾಹರಣೆಗೆ ಭಾರತರತ್ನ ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಗೌರವ ಡಾಕ್ಟರೇಟ್ ಘೋಷಣೆಯಾದಾಗ ಆ ವಿಶ್ವವಿದ್ಯಾಲಯದ ಗೌರವ ಹೆಚ್ಚುತ್ತದೆ. ಆದರೆ ಅದೇ ಬಿ.ಎಸ್.ಯಡ್ಯೂರಪ್ಪ ಅಮೇರಿಕೆಯಿಂದ ಇದೇ ಗೌರವ ಡಾಕ್ಟರೇಟ್ ಪಡೆದು ಬಂದಾಗ..ಮಾಧ್ಯಮಗಳ ಪ್ರತಿಕ್ರಿಯೆಗಳಿಗೆ ನೀವೆಲ್ಲ ಸಾಕ್ಷಿಯಾಗಿದ್ದೀರಿ. ಹಾಗೆ..
ರಾಮಣ್ಣ ಪರಿಶ್ರಮದಿಂದ ಸತತ ಅಧ್ಯಯನಶೀಲನಾಗಿ ಗಳಿಸಿದ್ದು ಡಾಕ್ಟರೇಟ್. ಅದೂ ‘ಧಾರವಾಡ ಜಿಲ್ಲೆಯ ಜನಪದ ಸಂಪ್ರದಾಯಗಳು’ ಎಂಬ ವಿಷಯವಾಗಿ. ಇದರಲ್ಲೇನು ವಿಶೇಷ? ಆತ ಸ್ವತ: ಜಾನಪದ ಗಾರುಡಿ. ನಮ್ಮ ಉತ್ತರ ಕರ್ನಾಟಕದ ಸದ್ಯದ ‘ಹುಕ್ಕೇರಿ ಬಾಳಪ್ಪ’. ಜಾನಪದವನ್ನೇ ಉಸಿರಾಗಿಸಿಕೊಂಡು, ಬಡತನದ ಬವಣೆಯನ್ನೇ ಹಾಸಿ-ಹೊದ್ದು..ಈ ಎತ್ತರಕ್ಕೆ ಏರಿದ ರಾಮಣ್ಣನ ಸಾಧನೆ ನನ್ನಲ್ಲಿ ಬೆರಗು ಮೂಡಿಸಿದೆ. ಜಿಡ್ಡುಗಟ್ಟಿರುವ ಸರಕಾರಿ ವ್ಯವಸ್ಥೆಯಲ್ಲಿ, ‘ಇಲ್ಲ’ ಎಂಬ ಪದವೇ ಆಳುತ್ತಿರುವ ಸರಕಾರಿ ಬಡ ಶಾಲೆಯ ಮಾಸ್ತರಾಗಿ, ಅದೂ ಹಮಾಲರ ಮಕ್ಕಳಿಗಾಗಿ ಆತ ದುಡಿದ ಪರಿ ಇದೆಯಲ್ಲ ನನ್ನಲ್ಲಿ ಅಭಿಮಾನ ತಂದಿದೆ.
ರಾಮಣ್ಣನ ಪರಿಚಯವಿರುವ ಎಲ್ಲರೂ ಈ ಶಾಲೆ ಕಂಡು ಬಂದಿದ್ದಾರೆ. ‘ನಮ್ಮಿಂದ ಏನಾಗಬೇಕು?’ ಎಂದು ಹಲವರು ಕೇಳಿದಾಗಲೊಮ್ಮೆ..‘ಆ ನನ್ನ ಬಡ ಮಕ್ಕಳಿಗೆ ಒಂದು ನೂರು ನೋಟ್ಸ್ ಬುಕ್ ಅಥವಾ ನೂರು ಪೆನ್ನು ಕೊಡಿಸ್ರಿ, ಒಂದ ನೂರು ಬಿಳಿ ಅಂಗಿ ಹೊಲಿಸಿ ಕೊಡ್ರಿ’ ಅಂದಿದ್ದಾನೆಯೇ ಹೊರತು, ಎಂದೂ ‘ತನಗೇನು ಬೇಕು?’ ಎಂದು ಹೇಳಿದ ಉದಾಹರಣೆ ಇಲ್ಲ. ತನ್ನ ಪಗಾರವನ್ನೂ ಆ ಮಕ್ಕಳ ಶಾಲಾ ಫೀ ಕಟ್ಟಲು ಬಳಸಿದ ಉದಾಹರಣೆ ನಾನೆಷ್ಟು ಕೊಡಲಿ?
ನನ್ನಂತಹ ಗೆಳೆಯರು ಆತನಿಗೆ ತೋರಿಸುವ ಚಿಕ್ಕ ಪ್ರೀತಿಯನ್ನೇ ದೊಡ್ಡ ಗೌರವ, ಜಗತ್ತಿನ ಅತೀ ದೊಡ್ದ ಔದಾರ್ಯ ಅಂತ ಭಾವಿಸುವವ ರಾಮಣ್ಣ. ಆ ನಯ, ವಿನಯ, ಸಮಾಧಾನ, ಸಮಯ ಪ್ರಜ್ಞೆ ನನಗೆ ಯಾವತ್ತೂ ರಾಮಣ್ಣನ ಪ್ರತಿ ಅಭಿಮಾನ ಮೂಡಿಸಿದೆ.
ನಾನು ಕೆಲಸ ಮಾಡುವ ಐ.ಎಂ.ಸಿ.ಆರ್ ಪತ್ರಿಕೋದ್ಯಮ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಪರಿಸರ ದಿನಾಚರಣೆ ಹಮ್ಮಿಕೊಂಡಿದ್ದೆವು. ಪರಿಸರ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲು ನಿರ್ಧರಿಸಿ, ರಾಮಣ್ಣನಿಗೆ ದೂರವಾಣಿಯಲ್ಲಿ ವಿಷಯ ತಿಳಿಸಿದೆ. ‘ಬರ್ತೀನೋ..ಮಾರಾಯ..’ ಒಂದೇ ವಾಕ್ಯದ ಉತ್ತರ. ಸರಿಯಾದ ಸಮಯಕ್ಕೆ ಬಂದ. ನಾನು ಕೆಲಸದಲ್ಲಿದ್ದೆ. ಆತ ಬಂದಾಗ ಯಾರೂ ಸ್ವಾಗತಕ್ಕೆ ನಿಂತಿರಲಿಲ್ಲ. ಮೇಲಾಗಿ ನಮ್ಮ ಸೆಕ್ಯೂರಿಟಿ ಆತನನ್ನು ತಡೆದರು. ಯಾವುದಕ್ಕೂ ಬೇಜಾರು ಪಡದೇ ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿ, ಕೈ ಚೀಲ ಸಹ ತೆಗೆದು ತೋರಿಸಿ, ನನ್ನ ಹುಡುಕಿ ಬಂದ ರಾಮಣ್ಣ!
ಈ ಯಾವ ಬೆಳವಣಿಗೆಗಳ ಬಗ್ಗೆಯೂ ಆತ ನನ್ನಲ್ಲಿ ಪ್ರಸ್ತಾಪಿಸಲಿಲ್ಲ. ನೇರವಾಗಿ ಕಾರ್ಯಕ್ರಮದ ಸಭಾಭವನಕ್ಕೆ ಬಂದ. ಕೈಯಲ್ಲಿ ಹಲಗಿ ಹಿಡಿದು ಹಾಡಿದ. ಇಡೀ ಸಭೆಗೆ ಮೋಡಿ ಮಾಡಿದ. ನಾವು ನೀಡಿದ ಸ್ಮರಣಿಕೆ ಸ್ವೀಕರಿಸಿದ ನಡೆದೇ ಬಿಟ್ಟ ತನ್ನ ಶಾಲೆಗೆ. ಸಂಜೆ ಕರೆ ಮಾಡಿದ..‘ಹರ್ಷಣ್ಣ..ನನ್ನಂತಹ ಬಡ ಕಲಾವಿದಗ ಅಂಥಾ ದೊಡ್ಡ ಕಾಲೇಜಿನ್ಯಾಗ ಅವಕಾಶ ಕೊಡಿಸಿದಿ..ಥ್ಯಾಂಕ್ಸ್ ಪಾ.’ ನನ್ನ ಕಣ್ಣಾಲೆಗಳು ತೇವಗೊಂಡವು. ಅಷ್ಟು ನಿರ್ಲಿಪ್ತ ಸರಸ್ವತಿಯ ಭಕ್ತ ಆತ. ಇತ್ತೀಚೆಗೆ ನಮ್ಮ ಪ್ರಾಚಾರ್ಯೆ ಡಾ.ನಯನಾ ಗಂಗಾಧರ ಅವರು ಸಂಪಾದಿಸಿದ ‘ಮಾಧ್ಯಮ ಅನುಭಾವಿ’ ಕೃತಿಯಲ್ಲಿ ರಾಮಣ್ಣ ‘ಸಾರ್ಥಕ ಸಂವಹನ ಸಾಧನಗಳಾಗಿ ಜಾನಪದ ಮಾಧ್ಯಮಗಳು’ ಎಂಬ ವಿಷಯವಾಗಿ ಒಂದು ಅಧ್ಯಾಯವನ್ನೇ ಬರೆದು ಕೊಟ್ಟ. ಗೌರವಧನ ವಿಚಾರಿಸಲಿಲ್ಲ, ಎಷ್ಟು ಗೌರವ ಪ್ರತಿ ನನಗೆ? ಎನ್ನಲಿಲ್ಲ. ಮತ್ತೆ ಮೇಲಿನ ಮಾತುಗಳನ್ನೇ ಉರು ಹೊಡೆದಂತೆ ಪುನರುಚ್ಛರಿಸಿದ. ನನಗೆ ನಿಜಕ್ಕೂ ಆತನ ಈ ಮುಗ್ಧತೆಯ ಬಗ್ಗೆ ಇಂದಿಗೂ ಬೇಜಾರಿದೆ.
ಬಿ.ಡಿ.ಗೋಯೆಂಕಾ ಪ್ರತಿಷ್ಠಾನ ‘ಕನ್ನಡಪ್ರಭ ವರ್ಷದ ವ್ಯಕ್ತಿ- ೨೦೦೯’ ಗೌರವ ದೊಂದಿಗೆ ಕೊಡಮಾಡುವ ೧ ಲಕ್ಷ ರುಪಾಯಿ ನಗದು ಪುರಸ್ಕಾರವನ್ನು ಸಹ ನಮ್ಮ ರಾಮಣ್ಣ ಹುಬ್ಬಳ್ಳಿ-ಧಾರವಾಡ ನಡುವೆ ಇರುವ ಹಮಾಲರ ಕಾಲೋನಿಯಲ್ಲಿ ಸರಕಾರ ಹಮಾಲರ ಮಕ್ಕಳಿಗಾಗಿಯೇ ಕಟ್ಟಿಸಿದ ಶಾಲೆಗೆ ದಾನ ಮಾಡಿದ್ದಾನೆ. ಅಂದಹಾಗೆ ಇದು ಆತ ಕಟ್ಟಿದ ಶಾಲೆಯೇ ಎಂಬುದು ವಿಶೇಷ. ಅಂತೂ ನಮ್ಮ ರಾಮಣ್ಣ ‘ಸಾಲಿ ಮಾಸ್ತರ್ ಗೆ ಬುದ್ಧಿ ಇಲ್ಲ’ ಎನ್ನುವ ಲೋಕೋಕ್ತಿಯನ್ನು ಸುಳ್ಳಾಗಿಸಿದ. ನನ್ನಂತಹ ಮಾಸ್ತರ್ ಗಳ ಪರವಾಗಿ ಡಬಲ್ ಕಾಂಗ್ರ್ಯಾಟ್ಸ್!
ಆತನಲ್ಲಿಯೂ ಮಾನವ ಸಹಜವಾದ ಕೆಲ ದೌರ್ಬಲ್ಯಗಳಿವೆ. ಆದರೆ ಅವು ನನಗೆ ಗೌಣ. ಕಾರಣ ಸಹೃದಯೀ ಸಂಸಾರವೊಂದಿಗನಲ್ಲಿ ಇದಕ್ಕಿಂತ ಹೆಚ್ಚಿನದ್ದನ್ನು ನಾನು ನಿರೀಕ್ಷಿಸುತ್ತೇನೆ ಎಂದಾದರೆ ಅದು ಅವಾಸ್ತವಿಕವಾದದ್ದು ಎಂದೇ ನನ್ನ ಭಾವನೆ. ಈ ಪ್ರಶಸ್ತಿ ಆತನಿಗೆ ದಕ್ಕುವಲ್ಲಿ ನನ್ನ ಅತ್ತಿಗೆ ಸೌ. ಗಿರಿಜಾ ಅವರ ತ್ಯಾಗ ಅನುಪಮವಾದದ್ದು. ಹಾಗೆಯೇ, ನನ್ನ ವೃತ್ತಿ ಗುರು ಹುಬ್ಬಳ್ಳಿಯ ಕನ್ನಡಪ್ರಭದ ಪ್ರಾಚಾರ್ಯ ವರದಿಗಾರ ಶ್ರೀ ಮಲ್ಲಿಕಾರ್ಜುನ ಸಿದ್ದಣ್ಣವರ ಅವರ ಶ್ರಮ ಸಾಕಷ್ಟಿದೆ. ಹಾಗಾಗಿ ಅವರಿಗೂ, ಸಂಪಾದಕ ಶ್ರೀ ಎಚ್.ಆರ್.ರಂಗನಾಥ ಹಾಗು ಕಾರ್ಯನಿರ್ವಾಹಕ ಸಂಪಾದಕ ಶ್ರೀ. ರವಿ ಹೆಗಡೆ ಅವರಿಗೆ ನನ್ನ ಕೃತಜ್ಞತೆ ಸಲ್ಲಬೇಕು.
ಆದರ್ಶ ಶಿಕ್ಷಕ ಡಾ.ರಾಮಣ್ಣ ಮೂಲಗಿ ಅವರಿಗೆ ಅಭಿನಂದನೆಗಳು. ಶಿಕ್ಷಣ ಕ್ಷೇತ್ರ ಇಂದು ಇಂತಹ ಕೆಲ ಆಲದ ಮರಗಳ ತಂಪಾದ, ಸೊಂಪಾದ, ಕಂಪಿನ, ಮೌಲ್ಯವಾನ್ ಶಿಕ್ಷಕರಿಂದ ಜೋಪಾನವಾಗಿದೆ ಎನ್ನಲು ಹರ್ಷ ಪಡುತ್ತೇನೆ.

Tuesday, June 24, 2008

ನನ್ನ ಗುರುಗಳ ಬಗ್ಗೆ ಎರಡು ಮಾತು


ಡಾ. ಎ.ಎಸ್. ಬಾಲಸುಬ್ರಮಣ್ಯ ನನ್ನ ಪತ್ರಿಕೋದ್ಯಮದ ಗುರುಗಳು. ಇದು ಅತ್ಯಂತ ಹೆಮ್ಮೆಯ ಹಾಗು ಅಭಿಮಾನದ ಸಂಗತಿ ನನಗೆ. ಅವರ 'ಏನಯ್ಯಾ..', 'ಮತ್ತೆನಯ್ಯ ಎಲ್ಲ ಆರಾಮ?' 'ಅದ್ಯಾಕೋ..ಹಂಗಾಡ್ತಿ..', 'ಥ್ಯಾಂಕ್ಸ್ ಕಣಯ್ಯ..'. 'ಶೀಲವಂತ..ಬಿಡು ಕಣಯ್ಯ ನಿನ್ನ ಧಾರವಾಡ ಬುದ್ಧಿ', 'ಮೊದಲು ಊರು ಬಿಡೂ'.
ಈ ಎಲ್ಲ ಮಾತುಗಳ ಹಿಂದಿನ ಕಳಕಳಿ ಇದೆಯಲ್ಲ ಅದೇ ನನ್ನಂತಹ ಸಾವಿರಾರು ವಿದ್ಯಾರ್ಥಿಗಳ ಉಪ ಪ್ರಜ್ಞೆಯಾಗಿ ಕೆಲಸ ಮಾಡಿದೆ. ಇಂದಿಗೂ ಮಾಡುತ್ತಿದೆ.
ಕಳೆದ ೨೫ ವರ್ಷಗಳಿಂದ ನಮ್ಮ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಮುನ್ನಡೆಸಿದ ರೀತಿ ಪ್ರೇರನಾದಾಯಿ.
ಮೊನ್ನೆ ನಡೆದ ನಮ್ಮ ವಿಭಾಗದ ಬೆಳ್ಳಿ ಹರ್ಷದ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದಾಗ, 'ನಾನು ಧಾರವಾಡಕ್ಕೆ ಬಂದು ಎಷ್ಟು ಬೇಗ ೨೫ ವರ್ಷಗಳಾದವು. ಇಷ್ಟು ವರ್ಷ ಪ್ರೀತಿಯಿಂದ ಪಾಠ ಮಾಡಿದ ಸಂತೃಪ್ತಿ ನನಗಿದೆ. ಪ್ರೊ. ಕುಂಬಾರ ಅವರ ಮಾರ್ಗದರ್ಶನದಲ್ಲಿ ನಾನು ಹಾಗು ಡಾ. ಗಂಗಾಧರಪ್ಪ ಮತ್ತು ಡಾ. ಎಚ್.ಕೆ.ಎಂ.ಸ್ವಾಮೀ ಶ್ರಮಿಸಿದ್ದೇವೆ. ವಿಶ್ವವಿದ್ಯಾಲಯಗಳಲ್ಲಿ ಅಭಿವೃದ್ಧಿ ಬಹಳ ನಿಧಾನಗತಿಯದ್ದು. ಇದ್ದ ಸಂಪನ್ಮೂಲಗಳನ್ನೇ ವ್ಯವಸ್ಥಿತವಾಗಿ ಬಳಸಿಕೊಂಡು ಗುರಿ ತಲುಪುವ ಅನಿವಾರ್ಯತೆ ನಮಗೆ. ಇನ್ನು ನಮ್ಮಲ್ಲಿ ಕಲಿತ ಹೋದ ವಿಧ್ಯಾರ್ಥಿಗಳು ವಿಭಾಗ ಕಟ್ಟುವ ಕೆಲಸದಲ್ಲಿ ಮನ ಮತ್ತು ಧನದ ಮೂಲಕ ಸಹಕಾರ ನೀಡಿದ್ದೆ ಆದರೆ, ಸುಸಜ್ಜಿತ ಸ್ಟುಡಿಯೋ ರೂಪುಗೊಲ್ಲುವುದರಲ್ಲಿ ಸಂಶಯವಿಲ್ಲ.'
ಆದರೆ..
ಇಲ್ಲಿ ಕಲಿತು ಹೋದ ಅದೆಷ್ಟೋ ಅಕ್ಷರ ಜೀವಿಗಳು ಕೆಟ್ಟದಾಗಿ ಮಾತನಾಡುತ್ತಾರೆ. ಇದು ಸಿನಿಕತನ. ಗೊತ್ತು, ಆದರೂ; ಅಹೋರಾತ್ರಿ ಪ್ರಸಿಧ್ಧಿ ಪಡೆಯಲು ಯಾರಾದರು ಗೌರವಾನ್ವಿತರನ್ನು ಹಿಗ್ಗ-ಮುಗ್ಗ ಬೈದು ಮಾತನಾಡುವುದು ಇಂದಿಗೂ ಪ್ರಚಲಿತದಲ್ಲಿರುವ ಹಳೆಯ ಫ್ಯಾಷನ್! ಇದು ನಮ್ಮ ಗುರುಗಳಿಗೂ, ಇತ್ತೀಚೇಗ ಮಾಸ್ತರಾಗಿರುವ ನನಗೂ ದಡ್ಡು ಬಿದ್ದ ಅನುಭವ. ಆದರೆ ಅರಿವು ಮರೆಯಿತಲ್ಲ..? ಅದು ಬೇಜಾರಿನ ಸಂಗತಿ.

Wednesday, June 18, 2008

ಅಪ್ಪ-ಅಮ್ಮ ಯಾವತ್ತು ತಮ್ಮ ಕರ್ತವ್ಯ ಮರೆತಿಲ್ಲ. ಅದಕ್ಕೆ ಸಾಕ್ಷಿ ನಾವು ಭೂಮಿಯ ಮೇಲಿರುವುದು!

ತಮ್ಮ ಹೊಟ್ಟೆ, ಬಟ್ಟೆ ಹಾಗು ನೆತ್ತಿ, ಹೌದು; ಈ ಶಬ್ದಗಳು ಅದೆಷ್ಟು ಸವಕಲಾಗಿದ್ದರು ಇಂದಿಗೂ ಅಪ್ಪ, ಅಮ್ಮ ತಮ್ಮ ಮಕ್ಕಳ ಅಭ್ಯುದಯಕ್ಕಾಗಿ ಕಟ್ಟಿ ಭವಿಷ್ಯ ರೂಪಿಸುತ್ತಾರೆ. ಆದರೆ ರೆಕ್ಕೆ ಬಲಿತ ಮೇಲೆ ಮರಿಗೆ ಇದರ ಮರೆವು! ಅಪ್ಪ- ಅಮ್ಮನಿಗೂ ಹೀಗೆಯೇ ಅವರ ಅಪ್ಪ- ಅಮ್ಮನ ನೆನಪು ಹಾರಿತ್ತೆ? ಬಹುಶ: ಇದು ಸೌಜನ್ಯದ ಪ್ರಶ್ನೆ ಅಲ್ಲ. ಇದನ್ನೇ ನಾನು ಅರಿವಿನ ಮರೆವು ಎಂದಿದ್ದು.